ಮಹಾವೀರ ಕಾಲೇಜಿನಲ್ಲಿ ಉದ್ಯೋಗ ಮಾಗ೯ದಶ೯ನ ಅಭಿಯಾನ
ಅಭಿಯಾನದ ಮುಖ್ಯ ರೂವಾರಿ, ಕಾಲೇಜಿನ ಹಳೆವಿದ್ಯಾರ್ಥಿ, ಮತ್ತು ಮೈಂಡ್ ಫುಲ್ ಕನ್ಸಲ್ಟಿಂಗ್ ಸ್ಥಾಪಕ ಸಂಜಯ್ ಭಟ್ ಅವರು ಮಾತನಾಡಿ ವಿದ್ಯಾರ್ಥಿಗಳು ಬಯಸಿದ ಉದ್ಯೋಗ ಹೊಂದಲು ಸಹಾಯ ಆಗುವಂತೆ ಮಾಹೆ, ಶ್ರೀ ಮಹಾವೀರ ಕಾಲೇಜು, ಹಳೆ ವಿದ್ಯಾರ್ಥಿಗಳು ಮತ್ತು ಉದ್ಯೋಗದಾತರು ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರೀ ಮಹಾವೀರ ಕಾಲೇಜು ಉದ್ಯೋಗ ಕೋಶದ ವಿದ್ಯಾರ್ಥಿ ಸದಸ್ಯರು ಕಾಲೇಜಿನ ಅಪ್ರತಿಮ ಸಾಧನೆಯನ್ನು ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಮಾರ್ಗದರ್ಶನ ಕೊಡಲು ಶ್ರೀ ಮಹಾವೀರ ಕಾಲೇಜು ಬದ್ದ ಎಂದು ತಿಳಿಸಿದರು.
ಮುಖ್ಯ ಭಾಷಣಗಾರಾದ ಹೊಲೋಜಿಕ್ ಸಂಸ್ಥೆ, ದಕ್ಷಿಣ ಏಷ್ಯ ಇದರ ವ್ಯವಹಾರ ನಿರ್ದೇಶಕರಾದ ವೆಂಕಟರಾಮನ್ ವಿ. ಅವರು ಮಾತನಾಡಿ, ಉದ್ಯೋಗ ಸಂದರ್ಶನಗಳಿಗೆ ಹೇಗೆ ಸಿದ್ಧರಾಗಬೇಕು ಎಂದು ವಿವರಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮಾಹೆ ಮಣಿಪಾಲ, ಸಂವಹನ ಅಧ್ಯಯನ ಸಂಸ್ಥೆಯ (ಎಮ್.ಐ.ಸಿ) ಸಂವಹನ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಕೆ. ಅವರು ಎಮ್.ಐ.ಸಿಯ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿಗಳು ಮತ್ತು ಈ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದವರನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಕಳೆದ ವರ್ಷ ಶೇಕಡ 100 ಉದ್ಯೋಗ ವಿದ್ಯಾರ್ಥಿಗಳಿಗೆ ಲಭ್ಯವಾಗಿದೆ ಅದೇ ರೀತಿ ಈ ವರ್ಷ ಕೂಡ ಶೇಕಡ 100 ಉದ್ಯೋಗ ನಮ್ಮ ವಿದ್ಯಾರ್ಥಿಗಳಿಗೆ ದೊರಕಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿನಿಯರಾದ ಶ್ರೇಷ್ಠ ಶೆಣೈ ಸ್ವಾಗತಿಸಿ, ಪ್ರತಿಷ್ಠ ನಿರೂಪಿಸಿದರು. ರಕ್ಷಿತಾ ವಂದಿಸಿದರು.