ಉಡುಪಿ ಜಿಲ್ಲೆಗೆ ಪ್ರವಾಸಿ ಮಾರ್ಗದರ್ಶಿಗಳ ಅಗತ್ಯವಿದೆ: ಅಜಯ್ ಪಿ. ಶೆಟ್ಟಿ

ಉಡುಪಿ ಜಿಲ್ಲೆಗೆ ಪ್ರವಾಸಿ ಮಾರ್ಗದರ್ಶಿಗಳ ಅಗತ್ಯವಿದೆ: ಅಜಯ್ ಪಿ. ಶೆಟ್ಟಿ


ಉಡುಪಿ: ಉಡುಪಿ ಜಿಲ್ಲೆಯು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಜಿಲ್ಲೆಯ ಆಹಾರ, ಆಚಾರ ವಿಚಾರ ಮತ್ತು ಆತಿಥ್ಯಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಜಗತ್ತಿನ ಮೂಲೆಮೂಲೆಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಪುರಾತನ ದೇವಸ್ಥಾನ ಸೇರಿದಂತೆ ಐತಿಹಾಸಿಕ ಸ್ಥಳಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ಜಿಲ್ಲೆಗೆ ಪ್ರವಾಸಿ ಮಾರ್ಗದರ್ಶಕರನ್ನು ನಿಯೋಜಿಸುವ ಕಾರ್ಯಕ್ಕೆ ಸರಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ, ಉಡುಪಿ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಬೆಳೆಯಲಿದೆ ಎಂದು ಹೊಟೇಲ್ ವೈಟ್ ಲೋಟಸ್ ಎಂ.ಡಿ. ಅಜಯ್ ಪಿ. ಶೆಟ್ಟಿ ಹೇಳಿದರು.

ಉಡುಪಿಗೆ ಬನ್ನಿ ನೇತೃತ್ವದಲ್ಲಿ ಹೊಟೇಲ್ ವೈಟ್ ಲೋಟಸ್ ಸಹಯೋಗದೊಂದಿಗೆ ಫೆ.8 ರಂದು ಉಡುಪಿಯ ವೈಟ್ ಲೋಟಸ್ ಸಭಾಂಗಣದಲ್ಲಿ ನಡೆದ ಉಡುಪಿ ಕಂಟೆಂಟ್ ಕ್ರಿಯೇಟರ್ಸ್ ಮೀಟ್ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ವಿಚಾರಗಳನ್ನು ಹೆಚ್ಚು ಪ್ರಸ್ತುತಪಡಿಸುವ ಮೂಲಕ ಇಕೋ ಟೂರಿಸಂ ಕ್ಷೇತ್ರವನ್ನು ಬಲಪಡಿಸುವ ಕಾರ್ಯದ ಬಗ್ಗೆ ಕಂಟೆಂಟ್ ಕ್ರಿಯೇಟರ್ಸ್ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ ಎಂದು ಅವರು ಹೇಳಿದರು.

ಜನಪದ ಚಿಂತಕ ಕಲಾವಿದ ಚೇತನ್ ನೈಲಾಡಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಕುಂದಗನ್ನಡ ಇತಿಹಾಸ ಮತ್ತು ಉಡುಪಿ ಹಾಗೂ ಕುಂದಾಪುರದ ಸ್ಥಳೀಯ ಆಚಾರ ವಿಚಾರ ಮತ್ತು ಸಾಂಸ್ಕೃತಿಕ ಸಾಮ್ಯತೆ ಹಾಗೂ ಕೆಲವು ಭಿನ್ನತೆಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಹಲವಾರು ದೇಶಗಳ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಅಪಾರ ಸಂಗ್ರಹವನ್ನು ಹೊಂದಿರುವ ಮಣಿಪಾಲ ಮಾಹೆ ಉದ್ಯೋಗಿ ಕೆ. ಲಕ್ಷ್ಮೀನಾರಾಯಣ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಆರ್ಯನ್ ಲೋಬೋ ಅವರಿಗೆ ಪ್ರಶಸ್ತಿ ಹಾಗೂ ರೂ. 3000 ನಗದು ಬಹುಮಾನ ನೀಡಿ ಗೌರವಿಸಲಾಯಿತು. 'ಮೈಸೂರು ಕಥೆಗಳು' ಖ್ಯಾತಿಯ ಧರ್ಮೇಂದ್ರ ಅವರು ಆನ್ ಲೈನ್ ಮೂಲಕ ಶುಭ ಹಾರೈಸಿದರು.

ಲಕ್ಷ್ಮೀ ಶೆಣೈ, ಸ್ನೇಹಾ ವಿನೋದ್ ಪೈ, ಶ್ರೇಯಾ ಮರವಂತೆ, ಶಾಂಭವಿ ಭಂಡಾರ್ಕರ್ ಹಾಗೂ ಶ್ರೀನಿಧಿ ಹಂದೆ ಮೂರು ವಿಚಾರಗೋಷ್ಠಿಗಳನ್ನು ನಡೆಸಿಕೊಟ್ಟರು. ಸುಧೀರ್ ನಾಯಕ್, ಪ್ರತಾಪ್ ಬಂಗೇರ, ಶ್ಯಾರನ್ ಪಿರೇರ, ದೀಕ್ಷಿತಾ ಕೋಟ್ಯಾನ್, ಚೈತ್ರಾ ಶೆಟ್ಟಿ, ಹರ್ಷಿತಾ ರಾವ್, ದೀಪಿಕಾ ಶೇಟ್, ಪ್ರಕ್ಷಿತ್ ಭಟ್, ಅಂಕಿತ್, ವಿವೇಕ್, ಪ್ರಸನ್ನ, ಮೇಧಾ ನಾಯಕ್, ಗಣಪತಿ ನಾಯಕ್ ಉಪಸ್ಥಿತರಿದ್ದರು. ಉಡುಪಿಗೆ ಬನ್ನಿ ಸಂಯೋಜಕ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article