ಬೀದಿ ವ್ಯಾಪಾರಿಗಳ ಮೇಲಿನ ದಾಳಿ ದುರ್ಬಲರ ನ್ಯಾಯ ಮತ್ತು ಸಹಾನುಭೂತಿಯ ನಿರಾಕರಣೆಯ ಸಂಕೇತ: ಬಿ.ಕೆ. ಇಮ್ತಿಯಾಜ್
Tuesday, February 17, 2026
ಉಳ್ಳಾಲ: ಬೀದಿಬದಿ ವ್ಯಾಪಾರದ ಕಾನೂನನ್ನು ಅನುಷ್ಠಾನ ಮಾಡದೆ ಅವರ ಮೇಲೆ ಬುಲ್ದೊಜರ್ ದಾಳಿ ಮಾಡಿರುವುದು ದುರ್ಬಲ ವರ್ಗಗಳ ಮೇಲೆ ಆಡಳಿತ ವ್ಯವಸ್ಥೆಯು ನ್ಯಾಯ ಮತ್ತು ಸಹಾನುಭೂತಿಯ ನಿರಾಕರಣೆಯ ಸಂಕೇತ ಎಂದು CITU ಸಂಯೋಜಿತ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.
ಅವರು ಇಂದು ಕುತ್ತಾರಿನ ಮುನ್ನೂರು ಯುವಕ ಮಂಡಲದ ಸಭಾಭವನದಲ್ಲಿ ಜರಗಿದ ಉಳ್ಳಾಲ ತಾಲೂಕು ಬೀದಿಬದಿ ವ್ಯಾಪಾರಸ್ಥರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗೂಡಂಗಡಿಗಳಲ್ಲಿ ಚಾ ಕುಡಿದು, ಚರುಮುರಿ ಸವಿದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕಿ ಪ್ರಚಾರ ಪಡೆಯುವ ಶಾಸಕರು, ಮಂತ್ರಿಗಳು ಬೀದಿ ವ್ಯಾಪಾರಿಗಳ ಮೇಲೆ ದಾಳಿ ನಡೆಯುವ ಕಷ್ಟದ ಕಾಲದಲ್ಲಿ ಕಣ್ಮರೆ ಆಗುತ್ತಾರೆ.ಇಂತಹ ಸಂಕಷ್ಟದ ಕಾಲದಲ್ಲಿ ಬೀದಿ ವ್ಯಾಪಾರಿಗಳ ಹಕ್ಕುಪ್ರಾಪ್ತಿಗೆ ಹೋರಾಟ ಅನಿವಾರ್ಯ ಎಂದು ಅವರು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಗತ್ತಿನ ಯಾವುದೇ ನಗರಗಳು ಬೀದಿ ವ್ಯಾಪಾರದಿಂದ ಹೊರತಾಗಿಲ್ಲ ಬೀದಿ ವ್ಯಾಪಾರಿಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದರೂ ಅವರ ಮೇಲೆ ದಾಳಿ ನಡೆಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ವಿನಾಯಕ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಅಧ್ಯಕ್ಷ ಮುಜಾಫರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಂತೋಷ ಆರ್.ಎಸ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಅಹ್ಮದ್ ಸಲೀಮ್ ಕೋಟೆಕಾರ್ ಸ್ವಾಗತಿಸಿ, ಕಲಂದರ್ ವಂದಿಸಿದರು.
ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು:
1. ಉಳ್ಳಾಲ ತಾಲೂಕಿನ ಬೀದಿಬದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ ಐಡಿ ಕಾರ್ಡ್, ಪ್ರಮಾಣ ಪತ್ರ ವಿತರಿಸಬೇಕು.
2. ಬೀದಿ ವ್ಯಾಪಾರದ ಕಾನೂನಿನ ವಿರುದ್ಧವಾಗಿ ಬುಲ್ದೊಜರ್ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
3. ಉಳ್ಳಾಲ ನಗರಸಭೆ ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಅದೀನದಲ್ಲಿ ಆದ್ಯತೆಯಲ್ಲಿ ಬೀದಿ ವ್ಯಾಪಾರ ವಲಯ ಸ್ಥಾಪಿಸಬೇಕು.
4. ಉಳ್ಳಾಲ, ಸೋಮೇಶ್ವರ ಬೀಚ್, ಹರೇಕಳ ಸೇರಿದಂತೆ ನದಿ ಮತ್ತು ಸಮುದ್ರ ವಿಹಾರಿಗಳಿಗೆ ಅನುಕೂಲ ಆಗುವಂತೆ ಬೀದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು.
5. ಬೀದಿ ವ್ಯಾಪಾರಿಗಳಿಗಾಗಿ ಇರುವ ಪಿ.ಎಂ ಸ್ವನಿಧಿ ಸಾಲ ಮಂಜೂರು ಮಾಡದೆ ಸತಾಯಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಎಂಬ ನಿರ್ಣಾಯಗಳನ್ನು ಅಂಗೀಕರಿಸಿದ ಸಮಾವೇಶವು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.




