ಮತಾಂತರವಾದರೆ ಎಸ್ಸಿ ಎಸ್ಟಿ ಸ್ಥಾನಮಾನ ಪಡೆಯಲು ಅರ್ಹರಲ್ಲ: ಸು.ಕೋ. ತೀರ್ಪು ಸ್ವಾಗತಾರ್ಹ
ಬಂಟ್ವಾಳ: ಭಾರತೀಯ ಪರಂಪರೆಯಲ್ಲಿ ಜನಿಸಿದ ಪಂಥಗಳಾದ ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇನ್ನು ಯಾವುದೇ ಮತಕ್ಕೆ ಮತಾಂತರವಾದರೆ ಎಸ್ಸಿ ಎಸ್ಟಿ ಸ್ಥಾನಮಾನ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಒಂದು ಐತಿಹಾಸಿಕ ತೀರ್ಪು ಆಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ನ ಮಾಜಿ ಉಪಾಧ್ಯಕ್ಷ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ತೀರ್ಪಿನ ಮೂಲಕ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಸಂವಿಧಾನದ ಆಶಯಗಳನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಕ್ರೈಸ್ತ ಮೀಷನರಿಗಳು, ಇಸ್ಲಾಮಿಕ್ ಮೂಲಭೂತವಾದಿಗಳು ವಿವಿಧ ಆಸೆ, ಆಮೀಷಗಳನ್ನು ಒಡ್ಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮುಗ್ಧ ಜನರನ್ನು ದಾರಿ ತಪ್ಪಿಸಿ,ತಮ್ಮ ಮೋಸದ ಜಾಲಕ್ಕೆ ಸಿಲುಕಿಸಿ ಅವರನ್ನು ಮತಾಂತರ ಮಾಡುವಂತ ಪ್ರಕ್ರಿಯೆಗೆ ಈತೀರ್ಪಿನಿಂದ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ ಎಂದು ತಿಳಿಸಿರುವ ಅವರು ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ಅತ್ಯಂತ ಮುಕ್ತ ಕಂಠದಿಂದ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.