ಮನೆ ಬೀಗ ಒಡೆದು ಆಭರಣ-ನಗದು ಕಳವು
ಕುಂದಾಪುರ: ಮನೆಯವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯ ಸಾಧಿಸಿ ಕಳ್ಳರು ಮನೆಯ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಬ್ರಹ್ಮಾವರ ತಾಲೂಕಿನ ಹೇರಾಡಿಯಲ್ಲಿ ನಡೆದಿದೆ.
ಬಾರಕೂರು ನಿವಾಸಿ ಮಂಜುನಾಥ ರಾವ್ (77) ಎಂಬುವವರ ಮನೆಯಲ್ಲಿ ಈ ಕಳವು ಸಂಭವಿಸಿದೆ.
ಮಾರ್ಚ್ 6 ರಂದು ರಾತ್ರಿ 7:45 ರಿಂದ 10:15 ರ ಅವಧಿಯಲ್ಲಿ ಮಂಜುನಾಥ ರಾವ್ ಮತ್ತು ಅವರ ಪತ್ನಿ ಮನೆಯ ಬಾಗಿಲು ಬೇಗ ಹಾಕಿಕೊಂಡು ಸಮೀಪದಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದರು.
ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.
ಬೆಡ್ರೂಮ್ನಲ್ಲಿದ್ದ ಗೋಡ್ರೇಜ್ ಬೀರುವನ್ನು ಒಡೆದ ಕಳ್ಳರು ಅದರಲ್ಲಿದ್ದ 47 ಗ್ರಾಮ್ ನ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, ಎರಡು ಚಿನ್ನದ ಮುತ್ತಿನ ಬಳೆಗಳು (32 ಗ್ರಾಂ), ಚಿನ್ನದ ಬೆಂಡೋಲೆ, ಉಂಗುರ ಹಾಗೂ ಬೆಳ್ಳಿಯ ಹರಿವಾಣ ಸೇರಿದಂತೆ ಒಟ್ಟು ಸುಮಾರು 14,18,000 ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದರೊಂದಿಗೆ ಮನೆಯಲ್ಲಿದ್ದ 49,000 ರೂಪಾಯಿ ನಗದು ಕೂಡ ಕಳುವಾಗಿದೆ. ಕಳವಾದ ಒಟ್ಟು ಸ್ವತ್ತಿನ ಮೌಲ್ಯ ಸುಮಾರು 14,67,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಜಾಡು ಪತ್ತೆಗೆ ತೊಡಗಿದ್ದಾರೆ.