ಶೃಂಗೇರಿ ಶಾಸಕರು ಆನೆಗುಡ್ಡೆಗೆ ಭೇಟಿ: ಕಾಡಾನೆ ಹಾವಳಿ ನಿವಾರಣೆಗಾಗಿ ಗಜಮುಖನಿಗೆ ಹರಿಕೆ
Saturday, March 7, 2026
ಕುಂದಾಪುರ: ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ ಶೃಂಗೇರಿಯ ಕೆಲ ಪ್ರಮುಖ ರೈತ ಮುಖಂಡರೊಂದಿಗೆ ಶನಿವಾರ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಶೃಂಗೇರಿ ಕ್ಷೇತ್ರದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ಅಲ್ಲಿನ ರೈತರು ಹಾಗೂ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಗೆ ಪರಿಹಾರ ದೊರಕಲೆಂದು ಶಾಸಕರು ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ತುಲಾಭಾರ ಸೇವೆಯ ಹರಕೆಯನ್ನು ಸಮರ್ಪಿಸುವ ಪ್ರಾರ್ಥನೆ ಮಾಡಿಕೊಂಡರು. ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲಾಯಿತು.
ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ದೇವರಲ್ಲಿ ಈ ಕುರಿತು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಡಾಮಕ್ಕಿ ಶಶಿಧರ ಶೆಟ್ಟಿ, ಅಣ್ಣಯ್ಯ ಪುತ್ರನ್ ಕುಂಭಾಸಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದು ದೇವರ ಪ್ರಸಾದವನ್ನು ಸ್ವೀಕರಿಸಿದರು.
ಆಡಳಿತ ಮಂಡಳಿಯ ಸದಸ್ಯರು, ಪರ್ಯಾಯ ಅರ್ಚಕ ಕೆ. ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ಕಚೇರಿಯ ಪ್ರಬಂಧಕ ನಟೇಶ್ ಕಾರಂತ್ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.