ಬಿಜೆಪಿ ಅಭಿವೃದ್ಧಿ ಯೋಜನೆಗೆ ಕಾಂಗ್ರೆಸ್ ‘ಲೇಬಲ್’: ಶಾಸಕ ಕಾಮತ್
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಚ್ಚನಾಡಿ ಎಸ್.ಟಿ.ಪಿ ಆವರಣದ ಒಳಚರಂಡಿ ಕಾಮಗಾರಿಗೆ ಬಳಸಲಾಗುತ್ತಿರುವ 40 ಕೋಟಿ ರೂಪಾಯಿ ಪಕ್ಕಾ ಕೇಂದ್ರ ಸರ್ಕಾರದ ಅನುದಾನವಾಗಿದೆ. ರಾಜ್ಯ ಸರ್ಕಾರವು ಕಳೆದ ಎರಡು ವರ್ಷಗಳಿಂದ ನಯಾಪೈಸೆ ನೀಡದೆ ಕುಂಭಕರ್ಣ ನಿದ್ರೆಯಲ್ಲಿದೆ. ಈಗ ಕೇಂದ್ರದ ಹಣದಲ್ಲಿ ಗುದ್ದಲಿ ಪೂಜೆ ಮಾಡಿ ತನ್ನ ಬದ್ಧತೆ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವುದು ಮಂಗಳೂರಿನ ಜನತೆಗೆ ಮಾಡುವ ಅವಮಾನ ಎಂದು ಟೀಕಿಸಿದರು.
2022ರಲ್ಲಿ ಬಿಜೆಪಿ ಸರ್ಕಾರವು ಅತ್ತಾವರದ ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರು ಮಾಡಿ ಗುದ್ದಲಿ ಪೂಜೆ ನಡೆಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಈ ಅನುದಾನಕ್ಕೆ ತಡೆ ನೀಡಿ, ಅಭಿವೃದ್ಧಿಯನ್ನು ಹಳ್ಳ ಹಿಡಿಸಿದೆ. ಈಗ ಅರಣ್ಯ ಇಲಾಖೆಯ ಸಮಸ್ಯೆ ಇದೆ ಎಂದು ಸುಳ್ಳು ನೆಪ ಹೇಳುತ್ತಿರುವುದು ಪೂಜ್ಯ ರಂಗರಾವ್ ಅವರಿಗೆ ಮಾಡುತ್ತಿರುವ ದ್ರೋಹ ಎಂದು ಅವರು ವಾಗ್ದಾಳಿ ನಡೆಸಿದರು. ಮಾರ್ಚ್ ತಿಂಗಳಲ್ಲೇ ಮಂಗಳೂರಿನ ಪ್ರತಿ ವಾರ್ಡ್ಗಳಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಸ್ಥಿತಿಯ ಗಂಭೀರತೆ ಅರಿಯದೆ, ಜೂನ್-ಜುಲೈ ವರೆಗೂ ನೀರು ಕೊಡುತ್ತೇವೆ ಎಂದು ಕಾಟಾಚಾರದ ಭೇಟಿ ನೀಡಿ ಮೋಜು ಮಾಡುತ್ತಿದ್ದಾರೆ. ಇವರಿಗೆ ಜನರ ಕಷ್ಟದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲ ಎಂದು ಕಿಡಿ ಕಾರಿದರು.
ಚುನಾಯಿತ ಪ್ರತಿನಿಧಿಗಳಿಲ್ಲದ ಸಮಯದಲ್ಲಿ ಆಡಳಿತಾಧಿಕಾರಿಗಳ ಮೂಲಕ ಆಸ್ತಿ ತೆರಿಗೆ ಏರಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ. ಒಂದೆಡೆ ಜನರಿಗೆ ತೆರಿಗೆಯ ಬರೆ ಹಾಕುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡಿ ಜನರ ಬೆವರಿನ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದರು.
ಇ-ಖಾತಾ ಪಡೆಯಲು ಜನರು ಪಡುತ್ತಿರುವ ನರಕಯಾತನೆಗೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇನ್ನು ಮಂಗಳೂರಿನ ಜಾಹೀರಾತು ಫಲಕಗಳ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೆ, ತಮಿಳುನಾಡು ಮೂಲದವರಿಗೆ ನೀಡುವ ಮೂಲಕ ಸ್ಥಳೀಯ ಉದ್ಯಮಿಗಳ ಹೊಟ್ಟೆಗೆ ಹೊಡೆಯುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರಮೇಶ್ ಕಂಡೆಟ್ಟು, ಶಕೀಲಾ ಕಾವ, ಪೂರ್ಣಿಮಾ, ಸುರೇಖಾ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.