ತುಳು ಅಧಿಕೃತ ಭಾಷೆ: ಆಂಧ್ರಪ್ರದೇಶ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆ
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎಮ್. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ೬ ಮಂದಿ ಸದಸ್ಯರ ಅಧ್ಯಯನ ಸಮಿತಿಯನ್ನು ಸರಕಾರ ನೇಮಿಸಿತ್ತು.
ಸದ್ರಿ ಸಮಿತಿಯು ಜನವರಿ 19 ಹಾಗೂ 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ, ವಿವಿಧ ಇಲಾಖೆ, ಕಛೆರಿಗಳಿಗೆ ಭೇಟಿ ನೀಡಿ ಆಂದ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಘಿಸುವ ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳು ಹಾಗೂ ವಿಧಿವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿತ್ತು.
ಸಮಿತಿಯು ವರದಿಯನ್ನು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್ ಅವರಿಗೆ ಅಧ್ಯಯನ ಸಮಿತಿ ಸದಸ್ಯರು ಸಲ್ಲಿಸಿದರು. ತುಳುಭಾಷೆಯ ಹಿನ್ನೆಲೆ ಹಾಗೂ ಚರಿತ್ರೆಯ ಬಗೆಗಿನ ಪ್ರಸ್ತಾವನೆಯನ್ನು ಕೂಡ ವರದಿ ಜೊತೆಗೆ ಸಲ್ಲಿಸಲಾಯಿತು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಯನ ಸಮಿತಿ ಸದಸ್ಯರಾದ ಯಕ್ಷಗಾನ ಅಕಾಡೆಮಿಯ ಸದಸ್ಯ ಸುಧಾಕರ ಶೆಟ್ಟಿ, ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಮ್. ಶುಭಶ್ರೀ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿದ್ದರು.