ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ: ಜನಪರ ಕಾಳಜಿಯ ನಿರ್ಧಾರ: ಶಾಸಕ ಕಾಮತ್
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಇಂಧನ ದರ ಏರಿಕೆಯ ಆತಂಕ ಸೃಷ್ಟಿಯಾಗಿರುವುದರ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರವು ದೇಶದ ಜನರಿಗೆ ಶುಭ ಸುದ್ದಿ ನೀಡಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 3 ಹಾಗೂ ಶೂನ್ಯಕ್ಕೆ ಇಳಿಸಿರುವುದು ಜನಪರ ಕಾಳಜಿಯ ನಿರ್ಧಾರವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುದ್ಧ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿರುವ ಸಂದರ್ಭದಲ್ಲಿ ವಿಶ್ವದ ಇತರೆ ದೇಶಗಳಂತೆ ನಾಗರಿಕರ ಮೇಲೆ ಬೆಲೆ ಏರಿಕೆ ಹೊರೆ ಹಾಕುವ ಬದಲು ಅಬಕಾರಿ ಸುಂಕವನ್ನೇ ಕಡಿತಗೊಳಿಸಲಾಗಿದೆ. ಆ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಪರ ಕಾಳಜಿಯನ್ನು ಪ್ರದರ್ಶಿಸಿ, ಕೋಟ್ಯಂತರ ಜನರಿಗೆ ನಿರಾಳತೆ ಒದಗಿಸಿದೆ. ತನ್ನ ಬೊಕ್ಕಸಕ್ಕೆ ಆಗುವ ನಷ್ಟವನ್ನು ಲೆಕ್ಕಿಸದೇ ಸಾರ್ವಜನಿಕ ಹಿತದೃಷ್ಟಿಯಿಂದ ದಿಟ್ಟ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ಪ್ರಧಾನಿಗಳಿಗೆ, ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಹಾಗೂ ಪೆಟ್ರೋಲಿಯಂ-ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಮಸ್ತ ದೇಶವಾಸಿಗಳ ಪರವಾಗಿ ಧನ್ಯವಾದಗಳು ಎಂದರು.
ಕೇಂದ್ರ ಸರ್ಕಾರದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ವ್ಯಾಟ್ ಅಥವಾ ಮಾರಾಟ ತೆರಿಗೆಯನ್ನು ಕಡಿತಗೊಳಿಸಬೇಕು. ಅದು ಬಿಟ್ಟು ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ? ಜನಸಾಮಾನ್ಯರಿಗೆ ಉಪಯೋಗವಾದರೆ ಕಾಂಗ್ರೆಸ್ಸಿಗೆ ಯಾಕೆ ಸಿಟ್ಟು? ಈ ಮೂಲಕ ಕಾಂಗ್ರೆಸ್ ಎಂದಿಗೂ ತನ್ನದು ಜನ ವಿರೋಧಿ ನೀತಿ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.