ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಅಗ್ರಹಿಸಿ ‘ಜನಾಂದೋಲನ ನಡಿಗೆ’

ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಅಗ್ರಹಿಸಿ ‘ಜನಾಂದೋಲನ ನಡಿಗೆ’


ಬಂಟ್ವಾಳ: ಬೆಂಗಳೂರು-ಮಂಗಳೂರು ರಾ.ಹೆಯ ಬ್ರಹ್ಮರಕೂಟ್ಟುವಿನಲ್ಲಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್‌ಗೇಟ್ ತೆರವಿಗೊಳಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ‘ಜನಾಂದೋಲನ ನಡಿಗೆ’ ನಡೆಯಿತು.


ಬಿ.ಸಿ. ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ನಡಿಗೆಗೆ ಚಾಲನೆ ನೀಡಲಾಯಿತು. ಬ್ರಹ್ಮರಕೂಟ್ಲು ಟೋಲ್‌ಗೇಟ್ ಸಮೀಪ ನಡಿಗೆ ಸಂಪನ್ನಗೊಂಡಿತು.


ಬಳಿಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಅವೈಜ್ಣಾನಿಕ, ನಿಯಮ ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸುವ ನಿಟ್ಟಿನಲ್ಲಿ ತಾರ್ಕಿಕ ಅಂತ್ಯದವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.


ಮಾಜಿ ಸಚಿವ ಬಿ. ಅಭಯಚಂದ್ರ ಜೈನ್, ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಎರಡು ಹಂತದಲ್ಲಿ ಶಾಂತಿಯುತವಾದ ಹೋರಾಟ ನಡೆಸಲಾಗಿದ್ದು,ಶೀಘ್ರವೇ ಸಮಿತಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಇದಕ್ಕು ಮೊದಲು ಕೇಂದ್ರಸಾರಿಗೆ ಸಚಿವರು, ಸರಕಾರ ಸ್ವಯಂಪ್ರೇರಿತವಾಗಿ ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಮುಂದಾಗಬೇಕು, ರಾ.ಹೆ. ಪ್ರಾಧಿಕಾರ ಜನಪ್ರತಿನಿಧಿ, ಹೋರಾಟಗಾರರನೊಳಗೊಂಡಂತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.


ಸಮಾನ ಮನಸ್ಕ ಸಮನ್ವಯ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರಮುಖರಾದ ಸೊಹೈಲ್ ಕಂದಕ್, ಪಿಯೂಸ್ ಎಲ್. ರೋಡ್ರಿಗಸ್, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಎಂ.ಎಸ್. ಮಹಮ್ಮದ್, ಅಶ್ವನಿಕುಮಾರ್ ರೈ, ಸಾಹುಲ್ ಹಮೀದ್, ಶಶಿಧರ ಹೆಗ್ಡೆ, ಕೆ.ಸಂಜೀವ ಪೂಜಾರಿ,ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಮಾಯಿಲಪ್ಪ ಸಾಲಿಯಾನ್, ವಾಸು ಪೂಜಾರಿ, ಸದಾಶಿವ ಬಂಗೇರ, ಇಬ್ರಾಹಿಂ ನವಾಝ್, ಶಬೀರ್ ಸಿದ್ದಕಟ್ಟೆ, ಬಿ.ಎಂ. ಅಬ್ಬಾಸ್ ಆಲಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಐಡಾ ಸುರೇಶ್, ಬಿ.ಎಂ. ಭಟ್, ಸುರೇಶ್ ಕುಮಾರ್, ಉಮ್ಮರ್ ಕುಂಞ ಸಾಲೆತ್ತೂರು, ಪದ್ಮನಾಭ ರೈ, ಸುದೀಪ್ ಶೆಟ್ಟಿ ಮಾಣಿ,ಸುದರ್ಶನ್ ಜೈನ್, ರಾಮಣ್ಣ ವಿಟ್ಲ, ಶೈಲಜಾ ರಾಜೇಶ್, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಸಹಿತ ವಿವಿಧ ಮುಖಂಡರು, ಜಿಪಂ, ತಾಪಂ, ಪುರಸಭೆ, ಪುರಸಭೆಯ ಮಾಜಿ ಸದಸ್ಯರು, ನಾನಾ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು.


ಕೇಂದ್ರಕ್ಕೆ ನುಗ್ಗಲು ಯತ್ನ:

ನಡಿಗೆ ಟೋಲ್ ಗೇಟ್ ತಲುಪುತ್ತಿದ್ದಂತೆ ಯುವಕರ ಗುಂಪು ಟೋಲ್ ವಸೂಲಿಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಪ್ರಸಂಗವು ನಡೆಯಿತು.ಈ ಸಂದರ್ಭ ಸ್ಥಳದಲ್ಲಿ ಬಂದೋಬಸ್ತಿನಲ್ಲಿದ್ದ ಪೊಲೀಸರು ಹಾಗೂ ಹೋರಾಟ ಸಮಿತಿಯ ಮುಖಂಡರು ತಡೆದರು.


ಈ ಹಂತದಲ್ಲಿ ಕೇಂದ್ರದ ಪಕ್ಕದಲ್ಲಿ ಹೈಡ್ರಾಮವೇ ನಡೆಯಿತು. ಕೆಲವರು ಅಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರೆ, ಇನ್ನುಕೆಲವರು ಕೇಂದ್ರದತ್ತ ಮತ್ತೆ ಮುನ್ನುಗ್ಗಲು ಯತ್ನಿಸಿದರು. ಇದು ಶಾಂತಿಯುತವಾದ ಪ್ರತಿಭಟನೆಯಾಗಿದ್ದು, ಯಾರು ಆಕ್ರೋಶಕ್ಕೊಳಗಾಗದಂತೆ ಮಾಜಿ ಸಚಿವ ರಮಾನಾಥ ರೈ ಅವರು ಪದೇಪದೇ ವಿನಂತಿಸಿಕೊಂಡರು. ಕೊನೆಗೂ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯ ಗೊಂಡಿತು. ಪೊಲೀಸರು ನಿಟ್ಟುಸಿರು ಬಿಟ್ಟರು.


ಬಿ.ಸಿ.ರೋಡು ನಾರಾಯಣಗುರು ವೃತ್ತದಿಂದ ಟೋಲ್ ಗೇಟ್ ವರೆಗೆ ಸುಮಾರು 3 ಕಿ.ಮೀ.ನಷ್ಟು ನಡಿಗೆಯ ಮೂಲಕ ಹೋರಾಟಗಾರರು ಸಾಗಿಬಂದರು. ಜಿಲ್ಲೆಯ ವಿವಿಧ ಭಾಗಗಳಿಂದಲು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಚಾಲಕ ಬಿ. ಶೇಖರ್ ವಂದಿಸಿದರು. ಮಧ್ಯಾಹ್ನದ ಬಳಿಕ ಟೋಲ್ ಗೇಟ್‌ನಲ್ಲಿ ವಾಹನಗಳಿಂದ ಟೋಲ್ ಸಂಗ್ರಹವು ಸ್ಥಗಿತಗೊಂಡಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article