ಅಭಿವೃದ್ಧಿ ಹೊಂದಬೇಕಾದರೆ, ಶಾಂತಿ ಮತ್ತು ಸುವ್ಯವಸ್ಥೆಯ ಧರ್ಮ ಪಾಲನೆ ಆಗಬೇಕು: ನ್ಯಾಯಮೂರ್ತಿ ವಿ. ಶ್ರೀಶಾನಂದ
ದೇವಾಲಯ ಎಂಬುದು ರೀಚಾರ್ಜಿಂಗ್ ಸೆಂಟರ್ ಇದ್ದಂತೆ. ಬಾಹ್ಯ, ಅಂತರಂಗದ ಉಪಾಸನೆಗೆ ನೆರವಾಗುತ್ತದೆ. ದೇವಾಲಯಕ್ಕೆ ಹೋಗಬೇಕಾದರೆ, ಎರಡನ್ನು ಬಿಡಬೇಕು. ತಲೆಯಲ್ಲಿರುವ ಅಹಂಕಾರ, ಕಾಲಲ್ಲಿರುವ ಚಪ್ಲಿ ಬಿಡಬೇಕು. ಎಷ್ಟೇ ದೊಡ್ಡವನಾದರೂ ಚಿಕ್ಕವನಾಗಲು ಕಲಿಯಬೇಕು ಎಂದರು.
ನಂಬಿಕೆಗಳ ಪುನರುತ್ಥಾನ ಮಾಡಿಕೊಳ್ಳಬೇಕು. ಅಷ್ಟಬಂಧ ಬ್ರಹ್ಮಕಲಶೋತ್ಸವ ಎಂಬುದು ಅದರ ಒಂದು ಭಾಗ. ಸರಳತೆಯನ್ನು ಸಾಧ್ಯ ಮಾಡುವ ರಚನಾತ್ಮಕ ಸನ್ನಿವೇಶ ದೇವಾಲಯಗಳಲ್ಲಿ ಇದೆ. ದೇವರ ಗರ್ಭಗುಡಿಯ ಪಾವಿತ್ರ್ಯದ ಕುರಿತು ಅರಿವಿರಬೇಕು ಗರ್ಭಗುಡಿಗೆ ಅರ್ಹತೆ ಇರುವವರು ಮಾತ್ರ ಪ್ರವೇಶ ಮಾಡಬೇಕು, ಹೇಗೆ ಆಪರೇಶನ್ ಥಿಯೇಟರ್ ಒಳಗೆ ಹೋಗಿರುವ ವೈದ್ಯರ ಭೇಟಿಯಾಗಲು ಅವರ ಸಂಬಂಧಿಕರಿಗೆ ಸಾಧ್ಯವಿಲ್ಲವೋ ಹಾಗೇ ಗರ್ಭಗುಡಿಯ ವ್ಯವಸ್ಥೆ. ದೇವಸ್ಥಾನಗಳು ಕೌಟುಂಬಿಕ ಹಾಗೂ ಸಾಂಸ್ಕೃತಿಕ ಪರಂಪರೆ ಮೌಲ್ಯವನ್ನು ವೃದ್ಧಿಸಬೇಕು ಎಂದರು.
ಭಾರತದಲ್ಲಿ ಸಾಮಾಜಿಕ ಮೌಲ್ಯ ಕುಸಿಯುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ ಅವರು, ಭಗವಂತನ ಕೈಂಕರ್ಯ ಮಾಡುವ ದೇಶ ಎಂಬುದು ಭಾರತ ಎಂದರು.
ಬೆಳಗ್ಗೆ ಎದ್ದು ಮೊಬೈಲ್ ಹುಡುಕುವುದು ವಿಶ್ವದ ಎಂಟನೇ ಅದ್ಭುತವಾಗುತ್ತಿದೆ. ಬೆಳಗ್ಗೆ ನಾವು ಭೂಮಿತಾಯಿ ನೆನೆಸಿಕೊಳ್ಳಬೇಕು ಎಂದರು.
ಧರ್ಮ ಎಂಬ ಪದಕ್ಕೆ ಸಂಸ್ಕೃತ ಹೊರತುಪಡಿಸಿದರೆ ಬೇರೆ ಯಾವುದೇ ಸಮಾನಾರ್ಥಕ ಪದ ಇಲ್ಲ. ಧಾರಯೇತ್ ಇತಿ ಧರ್ಮ. ನಾನು ಎಷ್ಟೇ ದೊಡ್ಡವನಾದರೂ ಭಗವಂತ ನೀಡಿದ್ದು ಎಂದರು. ಬೀಜಾಕ್ಷರಗಳನ್ನು ರೇಖಾಗಣಿತ ಮೂಲಕ ಹಿಡಿದಿಟ್ಟು ಅದನ್ನು ಫೋಕಸ್ ಮಾಡುವುದನ್ನು ಶ್ರೀಚಕ್ರದಲ್ಲಿ ಕಂಡಿದ್ದೇವೆ. ಅದರ ದರ್ಶನಭಾಗ್ಯದಿಂದ ಫಲಪ್ರಾಪ್ತಿಯಾಗಿದೆ, ಲಲಿತಾದೇವಿ ಅನುಗ್ರಹ ಪ್ರಾಪ್ತಿಯಾಗಬೇಕಿದ್ದರೆ ಶ್ರೀಚಕ್ರದರ್ಶನದಿಂದ ಸಾಧ್ಯ ಎಂದರು
ಪುರಾಣದ ಯುಗದಿಂದಲೂ ದುಷ್ಟಶಕ್ತಿಗಳನ್ನು ನಾವು ನೋಡ್ತೇವೆ, ಶ್ರೀಚಕ್ರದಿಂದ ದುಷ್ಟಶಕ್ತಿಗಳ ನಿವಾರಣೆ ಆಗುತ್ತದೆ, ಮಾನಸಿಕ ಅಶಾಂತಿ, ಕ್ಲೇಷ ಕಲಹ ಉಂಟಾದರೆ ಆಗುತ್ತದೆ. ಪದ್ಯಾಣದಲ್ಲಿರುವ ಸುಂದರ ಪರಿಸರದಲ್ಲಿ ಮಹಾಲಿಂಗೇಶ್ವರ ಮತ್ತು ಶ್ರೀಚಕ್ರವಿದೆ ಎಂದರು.
ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಶ್ರೀ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ, ಭಗವಂತ ನಮ್ಮನ್ನು ಕಾಯುತ್ತಿದ್ದಾನೆ ಎಂಬ ಭಾವನೆ ನಾವು ದೇವಸ್ಥಾನದೊಳಗೆ ಹೋಗುವ ವೇಳೆ ಇರಬೇಕು ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿ ಮಾತನಾಡಿ, ಭಗವಂತನ ಇರುವಿಕೆ ಸಹಸ್ರ ವರ್ಷಗಳ ಮೊದಲೂ ಇತ್ತು ಎಂದರು.
ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಹಿಂದುಗಳಾಗಿ ಬರಬೇಕು. ಎಲ್ಲರನ್ನೂ ಸಮಾನರಾಗಿ ಕಾಣಬೇಕು ಎಂದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮನಾರಾಯಣ ಜೋಷಿ ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶೂ ಮಾಲೀಕ ಶ್ರೀಪತಿ ಭಟ್, ಮಂಜೇಶ್ವರ ಶ್ರೀ ಅರಸು ಸಂಕಲ ದೈವಕ್ಷೇತ್ರದ ಅಧ್ಯಕ್ಷ ಡಾ.ಶ್ರೀಧರ ಭಟ್ ಮಾವೆ, ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನ್ಯಾಯವಾದಿ ಶಂಭು ಶರ್ಮಾ, ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡು ಅಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್, ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಬಲ್ಲಾಳ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಎಂ.ಡಿ. ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಚ ಡಾ.ಶಾಮ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣಶ್ಯಾಮ್, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಪದ್ಯಾಣ ವಂದಿಸಿದರು. ಸನತ್ ಕುಮಾರ್ ಪದ್ಯಾಣ ಪ್ರಾರ್ಥಿಸಿದರು. ಶರತ್ ಭಟ್ ಸೇರಾಜೆ ಮತ್ತು ನವ್ಯಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.


