ಪೊಳಲಿ ಚೆಂಡು ಉತ್ಸವ ಸಂಪನ್ನ
Friday, April 10, 2026
ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಐದು ದಿನಗಳ ಪೊಳಲಿ ಚೆಂಡು ಉತ್ಸವವು ಶುಕ್ರವಾರ ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು.
ಎಂದಿನಂತೆ ಪೂಜಾ ವಿಧಿ ವಿಧಾನ ಪೂರೈಸಿ ಚರ್ಮದ ಚೆಂಡನ್ನು ವಾದ್ಯಗೋಷ್ಠಿಯ ಮೂಲಕ ಗದ್ದೆಗೆ ತಂದು ಹಾರಿಸಲಾಯಿತು.ಚೆಂಡಿನ ಉತ್ಸವಕ್ಕು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿದ್ದು, ಪೊಳಲಿ ಸುತ್ತಮತ್ತಲಿನ ಗ್ರಾಮಸ್ಥರು, ಮಕ್ಕಳು ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ರಾತ್ರಿ ದೇವಳದ ವಠಾರದಲ್ಲಿ ಆಳು ಪಲ್ಲಕ್ಕಿ, ಬೆಳ್ಳಿ ರಥದ ಉತ್ಸವವು ನೆರವೇರಿತು.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಮಾಧವ ಭಟ್, ಹಿರಿಯ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್, ಅದರ್ಶ ಭಟ್, ದೇವಳದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರಾ ಸೂರ್ಯ ನಾರಾಯಣ ರಾವ್, ವಿವಿಧ ಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್ ಹಾಗೂ ದೇವಳದ ಪ್ರಮುಖರು, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಶುಕ್ರವಾರವು ಅಗಿರುವುದರಿಂದ ದೇವಳದಲ್ಲಿ ಬೆಳಗ್ಗಿನಿಂದಲೇ ಭಕ್ತರ ಸಂಖ್ಯೆಯು ಹೆಚ್ಚಿತ್ತು. ಏ.13 ರಂದು ಸಂಜೆ ಪೊಳಲಿಯ ರಥೋತ್ಸವ ನಡೆಯಲಿದೆ.

