ತೆಂಕನಿಡಿಯೂರು ಕಾಲೇಜು: ಗ್ರಾಮೀಣ ಶಿಬಿರ ಉದ್ಘಾಟನೆ

ತೆಂಕನಿಡಿಯೂರು ಕಾಲೇಜು: ಗ್ರಾಮೀಣ ಶಿಬಿರ ಉದ್ಘಾಟನೆ


ಬ್ರಹ್ಮಾವರ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಗ್ರಾಮೀಣ ಶಿಬಿರದ ಉದ್ಘಾಟನಾ ಸಮಾರಂಭ ಬ್ರಹ್ಮಾವರ ತಾಲೂಕಿನ ಕುಂಜಾಲಿನಲ್ಲಿರುವ ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಏಪ್ರಿಲ್ 13 ಸೋಮವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ವಿಠಲ ಕಿಣಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಿರ್ಮಿಸಿದ ಕರಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಅವರು, ಶಿಬಿರದಲ್ಲಿ ಅಂಕಗಳಿಗಿಂತ ಬದುಕು ಮುಖ್ಯ. ಚಟುವಟಿಕೆ, ಸೃಜನಶೀಲತೆ ಮತ್ತು ಮಾನವೀಯತೆಯ ಮಿಶ್ರಣವೇ ಶಿಬಿರದ ಹಿಂದಿನ ಔಚಿತ್ಯ. ಬದುಕನ್ನು ಕಟ್ಟಿಕೊಡುವುದೇ ಶಿಬಿರದ ಗುರಿ ಎಂದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಹಾಗೂ ಉದ್ಯಮಿಗಳಾದ ಗುರುರಾಜ ಮಕ್ಕಿತ್ತಾಯ ಅವರು ಮಾತನಾಡುತ್ತಾ, ವ್ಯಕ್ತಿ ಎಲ್ಲೇ ಹೋದರೂ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲವನ್ನು ಮರೆಯಬಾರದು. ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕ್ರಿಯಾಶೀಲತೆಯಿಂದ ಸನ್ನಡತೆಯ ಮಾರ್ಗದಲ್ಲಿ ಜೀವನದ ಗುರಿಗಳನ್ನು ಸಾಧಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ. ಗಾಂವಕರ್, ಭಾರತದ ಭವಿಷ್ಯ ತರಗತಿಯಲ್ಲಿ ನಿರ್ಧಾರವಾಗುತ್ತದೆ ಎಂದು ನಮ್ಮ ಅಂದಿನ ನಾಯಕರು ಬಲವಾಗಿ ನಂಬಿದ್ದರು. ಜೀವನದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಿಬಿರಗಳು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದರು.

ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಸುಷ್ಮಾ ಟಿ ಅವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಚಟುವಟಿಕೆಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗುರುರಾಜ ರಾವ್, ವಿ.ಕೆ. ಆರ್ ಆಚಾರ್ಯ ದೈಹಿಕ ಶಿಕ್ಷಣ ನಿರ್ದೇಶಕ ಸುಬ್ರಾಯ ನಾಯ್ಕ್, ಉಪನ್ಯಾಸಕರಾದ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ಉಷಾ, ಸಮಾಜಕಾರ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಂ.ಎಸ್. ಡಬ್ಲ್ಯೂ ವಿದ್ಯಾರ್ಥಿನಿ ಪವಿತ್ರ ಸ್ವಾಗತಿಸಿ, ಪ್ರಜ್ವಲ್ ವಂದಿಸಿದರು. ವಜ್ರೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article