ಮೇ 3ರಂದು 'ನಲಿ ಕುಣಿ' ಸಮಾರೋಪ ಸಮಾರಂಭ
ಕುಂದಾಪುರ: ಕರ್ನಾಟಕ ರಾಜ್ಯ ಸರಕಾರದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇವರು ಕಳೆದ 2೦ ದಿವಸಗಳಿಂದ ಆಯೋಜಿಸಿದ್ದ ಯಕ್ಷಗಾನ ಅಭಿನಯ ಮತ್ತು ಹೆಜ್ಜೆ ತರಬೇತಿ ಶಿಬಿರ 'ನಲಿ- ಕುಣಿ' ಮೇ 3ರಂದು ಸಮಾಪ್ತಿಗೊಳ್ಳಲಿದೆ. ಅಂದು ಸಂಜೆ ಗಂಟೆ 4.3೦ ರಿಂದ ಮಕ್ಕಳು ಶಿಬಿರದಲ್ಲಿ ಕಲಿತ ವಿದ್ಯೆಯ ಪ್ರದರ್ಶನ, 5.3೦ರಿಂದ ಆನಂದ ಸಿ.ಕುಂದರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಶಾಸಕ ಕಿರಣ್ ಕುಮಾರ ಕೊಡ್ಗಿ, ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಕಾರಂತ, ಸಾಲಿಗ್ರಾಮದ ಉದ್ಯಮಿ ಚಂದ್ರಶೇಖರ ಕಾರಂತ, ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ನ ಭಾರ್ಗವಿ ಆರ್. ಐತಾಳ, ಕಲಾಕೇಂದ್ರದ ಆರ್ಥಿಕ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಹಾಗೂ ಪ್ರಾಚಾರ್ಯ ಸದಾನಂದ ಐತಾಳರು ಉಪಸ್ಥಿತರಿರುತ್ತಾರೆ. ಸಂಜೆ 6.3೦ ರಿಂದ ಪುನಃ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಲಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.