ಮೇ.1 ರಂದು ಕಾರ್ಮಿಕರಿಗೆ ಸನ್ಮಾನ ಹಾಗೂ ಸೌಲಭ್ಯಗಳ ವಿತರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ತು ಹಾಗೂ ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ-ಮಾಲಕರ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕರಿಗೆ ಸನ್ಮಾನ ಹಾಗೂ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಮೇ.1 ರಂದು ಹಂಪನಕಟ್ಟೆಯ ತಾಜ್ ಮಾಲ್ ಆಟೋ ಪಾರ್ಕ್ ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಎಂಎಲ್ ಸಿ ಹಾಗೂ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಐವನ್ ಡಿಸೋಜಾ ಹೇಳಿದರು.
ಅವರು ಇಂದು ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಮುಖ್ಯ ಅತಿಥಿಗಳಾಗಿ ಡಿಸಿಪಿ ಕೆ. ರವಿಶಂಕರ್ ಅವರು ಭಾಗವಹಿಸಿ ರಸ್ತೆ ಸಂಚಾರದ ಬಗ್ಗೆ ಮಾಹಿತಿ ನೀಡಲಿದ್ದು, ಕಾರ್ಮಿಕ ಅಧಿಕಾರಿ ವಿಲ್ಮಾ ತೌರೊ ಕಾರ್ಮಿಕರಿಗೆ ಸಿಗುವ ಸೌಲತ್ತುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಶೇ.80 ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಅದರಲ್ಲಿ ಸಾಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ 5 ಜನರನ್ನು ಸನ್ಮಾನಿಸಲಾಗುವುದು, ಅದರೊಂದಿಗೆ 280 ಮಂದಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಖಾಸಗಿ ಬಸ್ ಗಳಲ್ಲಿ ದುಡಿಯುವ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ ಗಳಿಗೆ ಅಭದ್ರತೆ ಇದ್ದು, ಉದ್ಯೋಗ ಭದ್ರತೆಯೊಂದಿಗೆ ಇಪಿಎಫ್, ಇಎಸ್ ಐ ಹಾಗೂ ಹೋಟೆಲ್ ನಲ್ಲಿ ದುಡಿಯುವ ಕಾರ್ಮಿಕರಿಗೆ ಇಪಿಎಫ್ ಹಾಗೂ ಇಎಸ್ ಐ ನೀಡುವಂತೆ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ರಾಜೇಶ್, ಇಸ್ಮಾಯಿಲ್, ಮ್ಯಾಕ್ಸಿ, ಅನಿಲ್ ಲೋಬೋ, ಅಪ್ಪು ಸ್ವಾಮಿ ಉಪಸ್ಥಿತರಿದ್ದರು.