ಮಂಗಳೂರು ಮಹಾನಗರ ಪಾಲಿಕೆಗೆ 2025-26ನೇ ಸಾಲಿನಲ್ಲಿ 149.68 ಕೋಟಿ ರೂ. ತೆರಿಗೆ ಸಂಗ್ರಹ

ಮಂಗಳೂರು ಮಹಾನಗರ ಪಾಲಿಕೆಗೆ 2025-26ನೇ ಸಾಲಿನಲ್ಲಿ 149.68 ಕೋಟಿ ರೂ. ತೆರಿಗೆ ಸಂಗ್ರಹ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದು, 149.68 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. 112 ಕೋಟಿ ರೂ. ಗುರಿ ನಿಗದಿಯಾಗಿದ್ದು, ಇದನ್ನು ಮೀರಿ ತೆರಿಗೆ ಸಂಗ್ರಹವಾಗಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24ರಲ್ಲಿ 117 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, 2024-25ರ ಸಾಲಿನಲ್ಲಿ 137 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಪಾಲಿಕೆಯ 60  ವಾರ್ಡ್‌ಗಳಲ್ಲಿ 1,75,724 ವಸತಿಗಳಿದ್ದು, 44,074 ವಾಣಿಜ್ಯ, 1,175 ಕೈಗಾರಿಕೆ ಹಾಗೂ ಕೈಗಾರಿಕೆ ಹಾಗೂ ಗೃಹೇತರ 1,283 ಸೇರಿ ಒಟ್ಟು 2,22,256 ಆಸ್ತಿಗಳಿವೆ.  ಮಾರ್ಚ್ ಅಂತ್ಯದ ವೇಳೆಗೆ ಇದು 150 ಕೋಟಿ ರೂ. ದಾಟಿ ಸಂಗ್ರಹವಾಗಿದೆ ಎಂದರು.

3 ವಾರ್ಡ್‌ಗಳಲ್ಲಿ ಪೈಲಟ್ ಯೋಜನೆ:

ಆಸ್ತಿ ತೆರಿಗೆ ನಿರ್ಧರಣೆಗೆ ಸಂಬಂಧಿಸಿ ಮಂಗಳೂರು ಪಾಲಿಕೆಯ ಪದವು, ಅತ್ತಾವರ ಮತ್ತು ಹಂಪನಕಟ್ಟೆ ವಾರ್ಡ್‌ಗಳನ್ನು ಪೈಲಟ್ ಯೋಜನೆಯಾಗಿ  ತೆಗೆದುಕೊಳ್ಳಲಾಗಿದೆ. ಆಸ್ತಿ ತೆರಿಗೆಯನ್ನು ಹೇಗೆ ನಿರ್ಧರಿಸಬೇಕು ಎಂಬ ಬಗ್ಗೆ ಪಾಲಿಕೆಯ ಕಂದಾಯ ಅಧಿಕಾರಿ, ಸಿಬ್ಬಂದಿ ಜೊತೆ ಶೇ.50ರಷ್ಟು ಪ್ರಾಥಮಿಕ ಸರ್ವೆ  ಕಾರ್ಯ ನಡೆಸಲಾಗಿದೆ. ಈಗಾಗಲೇ 55.33 ಲಕ್ಷ ರೂ. ಹೆಚ್ಚುವರಿಯಾಗಿ ತೆರಿಗೆ ಸಂಗ್ರಹಿಸಲಾಗಿದೆ. ನೂರು ಶೇಕಡಾ ಸರ್ವೆಯಾದಲ್ಲಿ 3 ಕೋಟಿ ರೂ. ವರೆಗೆ ತೆರಿಗೆ  ಸಂಗ್ರಹ ಗುರಿ ಇರಿಸಿಕೊಳ್ಳಲಾಗಿದೆ. ಲಾಲ್‌ಬಾಗ್ ಮಾರುಕಟ್ಟೆ ಈ ಹಿಂದೆ 2002ರಲ್ಲಿ ಏಲಂ ಆಗಿತ್ತು. ಅಲ್ಲಿಂದ ಇಲ್ಲಿವರೆಗೆ 24 ವರ್ಷಗಳ ಕಾಲ ಕೇವಲ ವಾರ್ಷಿಕ  17.93 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಇದೀಗ ಮರು ಏಲಂ ನಡೆಸಲಾಗಿದ್ದು, 71.43 ಲಕ್ಷ ರೂ. ಹೆಚ್ಚುವರಿ ಆದಾಯ ಲಭಿಸಿದೆ. ಹಾಲಿ ಮೂರು ವಾರ್ಡ್ ಹೊರತುಪಡಿಸಿ ಉಳಿದ 57 ವಾರ್ಡ್‌ಗಳಲ್ಲಿ ಕೂಡ ಆಸ್ತಿ ತೆರಿಗೆ ನಿರ್ಧರಣೆಯ ಸರ್ವೆ ನಡೆಸಲಾಗುವುದು ಎಂದರು.

ಜಾಹಿರಾತಿಗೆ ಕ್ಯೂಆರ್‌ಕೋಡ್:

ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಜಾಹಿರಾತು ಫಲಕ ಹಾಕಬೇಕಾದರೆ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಹೊಸ ಸಾಫ್ಟ್‌ವೇರ್ ಮೂಲಕ ಕ್ಯೂಆರ್ ಕೋಡ್ ಅಳವಡಿಸುವುದರಿಂದ ಬೇಕಾಬಿಟ್ಟಿ ಜಾಹಿರಾತು ಹಾಕುವಂತಿಲ್ಲ. ಇದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಏಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯ್ತಿ:

ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯ್ತಿ ನೀಡಲಾಗುವುದು. ಪ್ರತಿ ವರ್ಷ ಆಸ್ತಿ ತೆರಿಗೆಯನ್ನು ಮುಂಚಿತವಾಗಿ ಏಪ್ರಿಲ್‌ನಲ್ಲಿ ಪಾವತಿಸಿದರೆ ಶೇ.5ರ ರಿಯಾಯ್ತಿ ನೀಡಲಾಗುತ್ತಿದೆ. ಪಾಲಿಕೆವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಂದಾಯ ವಿಭಾಗದ ಆಯುಕ್ತೆ ಅಕ್ಷತಾ ತಿಳಿಸಿದರು.

ಮಂಗಳೂರಿಗೆ ಸದ್ಯ ಕುಡಿವ ನೀರು ಕೊರತೆ ಇಲ್ಲ:

ಮಂಗಳೂರು ಪಾಲಿಕೆಗೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ 30 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹ ಇದೆ. ಆದರೆ ಅದರ ಕೆಳಗಿನ ಹರೇಕಳ  ಡ್ಯಾಂನಿಂದ ನೀರನ್ನು ಇಲ್ಲಿಗೆ ಪಂಪ್ ಮಾಡುವುದರಿಂದ ಈ ನೀರಿನ ಸಂಗ್ರಹವನ್ನು 110 ದಿನಗಳಿಗೆ ಸಾಕಾಗುವಷ್ಟು ಬಳಸಬಹುದು. ಹಾಗಾಗಿ ಸದ್ಯದ ಮಟ್ಟಿಗೆ  ಮಂಗಳೂರಿಗೆ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ಪಷ್ಟಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article