ಮಿಂಚು-ಗುಡುಗು ಸಹಿತ ಸಾಧಾರಣ ಮಳೆ ಸಾಧ್ಯತೆ
ಮಂಗಳೂರು: ಕರಾವಳಿಯಲ್ಲಿ ವಾತಾವರಣ ದಿನದಿಂದ ದಿನಕ್ಕೆ ಬಿಸಿಯೇರುತ್ತಿದ್ದು, ಏಪ್ರಿಲ್ 15 ರಿಂದ 18 ರವರೆಗೆ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಿಂಚು-ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮದ ಮಾರುತಗಳ ಪ್ರಭಾವ ಮತ್ತು ಕರ್ನಾಟಕದಿಂದ ಕೇರಳದವರೆಗೆ ಹರಡಿರುವ ವಾಯುಭಾರ ಕುಸಿತದ ರೇಖೆಯು ಈ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ. ಉತ್ತರ ಭಾರತದಲ್ಲಿ ಶುಷ್ಕ ಹವೆ ಮುಂದುವರಿದರೆ, ದಕ್ಷಿಣದಲ್ಲಿ ತೇವಾಂಶಭರಿತ ಗಾಳಿಯು ಮಳೆಯನ್ನು ಹೊತ್ತು ತರುತ್ತಿದೆ. ಈ ಹಿನ್ನೆಲೆಯಲ್ಲಿ ದ.ಕ ಹಾಗು ಉಡುಪಿ ಸುತ್ತಮುತ್ತ ಸಾದಾರಣ ಮಳೆ ಸಾಧ್ಯತೆ ಇದೆ.
ಬುಧವಾರ ಸಂಜೆ 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಒಣ ಚಳಿ ಮುಂದುವರಿದಿದೆ. ಗುರುವಾರ ಹಾಗೂ ಶುಕ್ರವಾರ ಕರಾವಳಿ ಭಾಗದಲ್ಲಿ ದಿನದ ಬಹುತೇಕ ಭಾಗದಲ್ಲಿ ಬಿಸಿಲ ಪ್ರಖರತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮಳೆ ಕಾಡು ಹಾಗೂ ಪಶ್ಚಿಮಘಟ್ಟದ ಹಲವೆಡೆ ಹೆಚ್ಚಿನ ಪ್ರಮಾಣದ ಮೋಡಕವಿದ ವಾತಾವರಣ ಕಂಡುಬಂದಿದೆ. ಪಶ್ಚಿಮಘಟ್ಟ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ ರಾತ್ರಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಪಾಜೆ ಹಾಗೂ ಚಾರ್ಮಾಡಿ, ಕುದುರೆಮುಖ, ಆಗುಂಬೆ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಶೃಂಗೇರಿ, ತೀರ್ಥಹಳ್ಳಿ, ಹೊಸನಗರ ಸುತ್ತಮುತ್ತ ಸಹ ಮಳೆಯ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.