ಸಂಚಾರ ಠಾಣೆಯ ಪೊಲೀಸ್ಗೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರಕರಣ ದಾಖಲು
ಮಂಗಳೂರು: ನಗರದ ನಂತೂರು ಜಂಕ್ಷನ್ನಲ್ಲಿ ಎ.೧೮ ರಂದು ಸಂಚಾರ ನಿಯಂತ್ರಣ ಮಾಡುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಅವಾಚ್ಯ ಪದ ಬಳಸಿ ಬೈದು, ಹಲ್ಲೆ ನಡೆಸಿ, ಮೊಬೈಲ್ ಕಿತ್ತು ನೆಲಕ್ಕೆ ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಾಲಿಗೆರೆ ಹಾಲೇಶ ಎಂಬವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಪ್ರವೀಣ್ ಹಾಗೂ ಜಿ. ಚಂಪಾ ಜೊತೆ ತಾನು ನಂತೂರು ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನದ ವೇಳೆ ಬಿಕರ್ನಕಟ್ಟೆ ಕಡೆಗೆ ಹೋಗುವ ಫ್ರೀ ಲೆಫ್ಟ್ ರಸ್ತೆಯಲ್ಲಿ ಒಬ್ಬಾತ ಬೈಕ್ ಅಡ್ಡ ನಿಲ್ಲಿಸಿ ವಾಹನಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದ. ಇದನ್ನು ತಾನು ಪ್ರಶ್ನಿಸಿದಾಗ ಆತ ಪ್ರವೀಣ್ಗೆ ಹೊಡೆದಿದ್ದು, ಆತನೊಂದಿಗೆ ಇದ್ದ ಮಹಿಳೆ ಕೂಡ ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಸಿದ್ದಾರೆ.
ಬಳಿಕ ಬೈಕ್ ಸವಾರನು ಪ್ರವೀಣ್ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದಾನೆ. ಇದರಿಂದ ಸುಮಾರು 28 ಸಾವಿರ ರೂ. ನಷ್ಟ ಉಂಟಾಗಿದೆ. ಬೈಕ್ ಸವಾರ ಹೊಡೆದ ಪರಿಣಾಮ ಪ್ರವೀಣ್ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಲಿಗೆರೆ ಹಾಲೇಶ ದೂರಿನಲ್ಲಿ ತಿಳಿಸಿದ್ದಾರೆ.