ಡಾ. ರಾಜ್ಕುಮಾರ್ ಸರಳತೆ, ಆದರ್ಶ ವ್ಯಕ್ತಿತ್ವ ಯುವಜನತೆಗೆ ಪ್ರೇರಕ: ಎಂ.ಎ. ಗಫೂರ್
ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಉಪನ್ಯಾಸ ನೀಡಿ ಮಾತನಾಡಿ, ಡಾ.ರಾಜ್ಕುಮಾರ್ ಅವರು ಕನ್ನಡ ನಾಡು ಸಮೃದ್ಧಗೊಳಿಸಿದ ಮಹಾನ್ ನಾಯಕ. ಅಭಿಮಾನಿಗಳು ತಮ್ಮ ಆದರ್ಶಗಳನ್ನು ಹಿಂಬಾಲಿಸುವ ಕಾರಣದಿಂದ ತಾವು ನಟಿಸಿದ ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯವನ್ನು ಅಭಿನಯಿಸಲಿಲ್ಲ. ಚಲನಚಿತ್ರದಲ್ಲಿ ಮಾತ್ರವಲ್ಲದೆ ಅವರು ನಿಜ ಜೀವನದಲ್ಲಿಯೂ ನಾಯಕರಾಗಿದ್ದು, ಅಭಿನಯವನ್ನು ನಿಜ ಜೀವನದಲ್ಲಿಯೂ ತೋರಿಸಿದವರು ಎಂದು ಹೇಳಿದರು.
ಕನ್ನಡ ಚಲನಚಿತ್ರ ರಂಗದ ಬಹುಬೇಡಿಕೆಯ ನಟರಾಗಿದ್ದ ಅವರು ಪರಭಾಷೆ ಚಲನಚಿತ್ರದಲ್ಲಿ ನಟಿಸುತ್ತಿರಲಿಲ್ಲ. ಐತಿಹಾಸಿಕ, ಭಕ್ತಿ ಪ್ರಧಾನ, ಪೌರಾಣಿಕ ಹೀಗೆ 212 ಚಲನಚಿತ್ರಗಳಲ್ಲಿ ನಟಿಸಿದ ಅವರು ಜೀವನದ ಎಲ್ಲಾ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿನಯದ ಜೊತೆಗೆ ಅವರ ಗಾಯನಗಳು ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದವು. ಅವರ ಚಲನಚಿತ್ರಗಳು ಮನರಂಜನೆ ಮಾತ್ರವಲ್ಲದೆ ಜೀವನದ ಉತ್ತಮ ಮೌಲ್ಯಗಳನ್ನು ತಿಳಿಸುತ್ತಿದ್ದವು. ಅವರಿಗೆ ರಾಜಕೀಯ ಅವಕಾಶಗಳು ಒದಗಿ ಬಂದರೂ ಅದನ್ನು ತೊರೆದು, ಕನ್ನಡ ಚಲನಚಿತ್ರರಂಗದಲ್ಲಿಯೇ ವಿಶೇಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಗೋಕಾಕ್ ಚಳುವಳಿಯಂತಹ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ, ಕನ್ನಡದ ಅಸ್ಮಿತೆ ಎತ್ತಿ ಹಿಡಿದವರಲಿ ಡಾ.ರಾಜ್ಕುಮಾರ್ ಅವರು ಒಬ್ಬರಾಗಿದ್ದರು. ಕನ್ನಡ ನಾಡು ನುಡಿಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದು ಹರೀಶ್ ರೈ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪೊ. ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್ ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಲಹೆಗಾರ ಡಾ. ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕ ಡಾ. ವೆಂಕಟೇಶ್ ನಾಯಕ್ ನಿರೂಪಿಸಿದರು.

