ನಾರಿ ಶಕ್ತಿಗೆ ಬಲ ತುಂಬಿದವರು ಕಾಂಗ್ರೆಸ್: ಶಾಲೆಟ್ ಪಿಂಟೊ
ಮಂಗಳೂರು: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ತರುವ ಮೂಲಕ ನಾರಿಯರು ರಾಜಕೀಯವಾಗಿ ಸಶಕ್ತರಾಗಲು ಮೂಲ ಕಾರಣ ಕಾಂಗ್ರೆಸ್ ಪಕ್ಷ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಮಹಿಳೆಗೆ ಮೊದಲ ಬಾರಿಗೆ ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್ ಸ್ಥಾನ ನೀಡಿ ಗೌರವಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಮಹಿಳೆಯರು ರಾಜಕೀಯವಾಗಿ ಸದೃಢರಾಗಿ, ಆತ್ಮವಿಶ್ವಾಸದಿಂದ ಅಧಿಕಾರ ನಡೆಸುವ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಮೂಲ ತಳಹದಿ ಪಂಚಾಯತ್ರಾಜ್ ವ್ಯವಸ್ಥೆ. ಬಿಜೆಪಿಯಲ್ಲಿರುವ ಮಹಿಳೆಯರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಲಿ’ ಎಂದರು.
ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ‘ಸಂವಿಧಾನ ಮಸೂದೆ-೨೦೨೬’ರ ಜೊತೆಗೆ ತರಾತುರಿಯಲ್ಲಿ ನಾರಿಶಕ್ತಿ ವಂದನಾ ಅಧಿನಿಯಮ ಮಸೂದೆಯನ್ನು ಮಂಡಿಸಿದ್ದು ಯಾಕೆ? ಮಹಿಳಾ ಮೀಸಲು ಮಸೂದೆಯನ್ನು ಪ್ರತ್ಯೇಕವಾಗಿ ಮಂಡಿಸಿದ್ದರೆ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಇದನ್ನು ಬೆಂಬಲಿಸುತ್ತಿತ್ತು. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ನಾರಿಶಕ್ತಿ ವಂದನಾ ಮಸೂದೆಯನ್ನು ಪ್ರತ್ಯೇಕ ವಾಗಿ ಮಂಡಿಸಿ, ಅದನ್ನು ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ಪ್ರಮುಖರಾದ ಉಷಾ ಅಂಚನ್, ನಮಿತಾ ರಾವ್, ಗೀತಾ ಅತ್ತಾವರ, ಸುರೇಖಾ ಚಂದ್ರಹಾಸ್, ರೂಪಾ ಚೇತನ್, ಸಾರಿಕಾ ಪೂಜಾರಿ ಉಪಸ್ಥಿತರಿದ್ದರು.