ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ಷಮೆಯಾಚಿಸಬೇಕು: ಶಾಸಕ ಕಾಮತ್ ಆಗ್ರಹ
Tuesday, April 21, 2026
ಮಂಗಳೂರು: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹಿರಿತನದ ಗೌರವವನ್ನು ಕಳೆದುಕೊಂಡಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ನಿಜವಾದ ಭಯೋತ್ಪಾದಕರನ್ನು ಬ್ರದರ್ಸ್ಗಳು ಎನ್ನುವುದು, ದೇಶಕ್ಕಾಗಿ ಸರ್ವಸ್ವವನ್ನು ಮರೆತು ದುಡಿಯುವವರನ್ನು ಭಯೋತ್ಪಾದಕರು ಎನ್ನುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಚುನಾವಣೆ ಸಂದರ್ಭದಲ್ಲಿ ಓಲೈಕೆ ರಾಜಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರ ಹುಟ್ಟು ಗುಣ. ಅದಕ್ಕೆ ತಕ್ಕ ಬೆಲೆಯನ್ನು ಜನರೇ ನೀಡುತ್ತಾ ಬಂದಿದ್ದರೂ ಅವರಿಗೆ ಬುದ್ದಿ ಬಂದಿಲ್ಲ ಎಂದರು.
ಜಾಗತಿಕ ಮಟ್ಟದ ಅತ್ಯಂತ ಪ್ರಭಾವಶಾಲಿ ನಾಯಕರ ಸಾಲಿನಲ್ಲಿ ಮೋದಿಯವರು ಅಗ್ರಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ವಿಶ್ವವ್ಯಾಪಿ ಮನ್ನಣೆಯನ್ನು ಗಳಿಸಿದೆ. ಅಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಹೀಗಾಗಿಯೇ ದೇಶದ ಜನತೆ ಹೆಮ್ಮೆಯಿಂದ ಮೂರನೇ ಬಾರಿಗೆ ಅವರನ್ನು ಪ್ರಧಾನಿಯಾಗಿ ಮುಂದುವರಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ಸಿಗರು ದ್ವೇಷ ಕಾರುತ್ತಾ ಹತಾಶೆಯಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.