ಅಂಬೇಡ್ಕರ್ ಹಾಗೂ ನಾರಾಯಣ ಗುರು ತತ್ವಾದರ್ಶಗಳಲ್ಲಿ ಸೌಮ್ಯತೆ: ಸುನಿಲ್ ಕುಮಾರ್ ಬಜಾಲ್
ಅವರು ಏ.14 ರಂದು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಎಂಬ ಹೆಸರು ಕೇಳಿದಾಗ ಮೊದಲು ತಿಳಿಯುವುದು ಅಂಬೇಡ್ಕರ್ ಒಬ್ಬರು ಸಂವಿಧಾನ ಶಿಲ್ಪಿ, ಅಸ್ಪೃಶ್ಯತೆಯ ವಿರುದ್ಧ ದಲಿತರ ಪರವಾಗಿ ನಿಂತವರು, ಆದರೆ ಅಂಬೇಡ್ಕರ್ ಅವರು ಸಮಸ್ತ ಶೋಷಿತ ಅವಕಾಶ ವಂಚಿತ ಜನಗಳ ಪರವಾಗಿದ್ದವರು. ಮೇಲ್ವರ್ಗ ಮತ್ತು ಕೆಳವರ್ಗ ಅನ್ನುವುದು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಇದೆ ಎಂದರು.
ನಾರಾಯಣ ಗುರುಗಳ ತತ್ವ ಆದರ್ಶಗಳು ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶಗಳಲ್ಲಿ ಸೌಮ್ಯತೆ ಇದೆ. ಇವರಿಬ್ಬರೂ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದರು.
ಭಾರತ ದೇಶದ ಸಂವಿಧಾನದಲ್ಲಿ ದೊಡ್ಡ ಪಾತ್ರ ಇರುವುದೇ ಅಂಬೇಡ್ಕರ್ ಅವರದ್ದು ಹಾಗಾಗಿ ಶೋಷಕ ವರ್ಗದ ಜನರು ಅಂಬೇಡ್ಕರ್ ಅವರನ್ನು ವಿರೋಧಿಸುವುದು ಎನ್ನುತ್ತಾ ಅಂಬೇಡ್ಕರ್ ಜಯಂತಿಯ ದಿನ ಮಾತ್ರವಲ್ಲದೆ, ನಿತ್ಯದ ಜೀವನದಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಅರಿತುಕೊಳ್ಳಬೇಕು. ತಾನು ಸಹ ಯುವವಾಹಿನಿಯ ಸಂಸ್ಥೆಯ ಸದಸ್ಯ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಮಂಗಳೂರು ಘಟಕದ ಸದಸ್ಯ ರಾಜೇಂದ್ರ ಚಿಲಿಂಬಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶುಭಾ ರಾಜೇಂದ್ರ ದಂಪತಿಯ ಸುಪುತ್ರ ಸಮರ್ಥ್ ರಾಜೇಂದ್ರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದು, ಈ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಯುವವಾಹಿನಿ ಕೇಂದ್ರ ಸಮಿತಿ ದ್ವೀತಿಯ ಉಪಾಧ್ಯಕ್ಷ ಸುರೇಶ್ ಪೂಜಾರಿ ಮಾತನಾಡಿ, ಇಂದಿನ ಈ ಕಾರ್ಯಕ್ರಮವು ಮಂಗಳೂರು ಘಟಕ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದ ಅವರು ತನ್ನ ಬಾಲ್ಯದಲ್ಲಿ ಅಂಬೇಡ್ಕರ್ ಬಗ್ಗೆ ನಡೆದ ಘಟನೆಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಇಂದು ನಾವು ಪಡೆದಿರುವ ಮೂಲಭೂತ ಸೌಕರ್ಯವಾಗಲಿ, ಧಾರ್ಮಿಕ ಹಾಗೂ ಶೈಕ್ಷಣಿಕ ಹಕ್ಕುಗಳಾಗಲಿ ಎಲ್ಲದಕ್ಕೂ ಸಂವಿಧಾನವೇ ಮೂಲ ಕಾರಣ ಎಂದರು.
ಸಮಾಜ ಸೇವಾ ನಿರ್ದೇಶಕರಾದ ದಿನೇಶ್ ಕಂದಾವರ ಸ್ವಾಗತಿಸಿದರು. ಘಟಕದ ಸದಸ್ಯರಾದ ಸತೀಶ್ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಉಷಾ ಕೆ. ವಂದಿಸಿದರು.