ಆಗಸ್ಟ್‌ನಲ್ಲಿ ತೆರೆಗೆ ‘ವಾದಿರಾಜ ವಾಲಗ ಮಂಡಳಿ’

ಆಗಸ್ಟ್‌ನಲ್ಲಿ ತೆರೆಗೆ ‘ವಾದಿರಾಜ ವಾಲಗ ಮಂಡಳಿ’


ಮಂಗಳೂರು: ಸಹಕಾರಿ ರಂಗದ ದಿಗ್ಗಜ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ‘ಎಂ.ಎನ್.ಆರ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಚೊಚ್ಚಲ ಹಾಸ್ಯಮಯ ಚಲನಚಿತ್ರ ‘ವಾದಿರಾಜ ವಾಲಗ ಮಂಡಳಿ’ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 

ನಗರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ಮಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ವರಾಹ ರೂಪಂ” ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಕರಾವಳಿ ಕನ್ನಡದ ಸೊಗಡಿನೊಂದಿಗೆ, ರಾಜ್ಯದ ಎಲ್ಲಾ ಭಾಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಹಾಸ್ಯ, ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಳಗೊಂಡ ಪಕ್ಕಾ ಮನೋರಂಜನಾ ಪ್ಯಾಕೇಜ್ ಇದಾಗಿದೆ ಎಂದು ತಿಳಿಸಿದರು. 

ಚಿತ್ರದಲ್ಲಿ ಕರಾವಳಿಯ ಜನಪ್ರಿಯ ಕಲಾವಿದರ ದೊಡ್ಡ ಪಡೆಯೇ ಇದೆ. ‘ಗುಂಡುಮಾಮ’ ಖ್ಯಾತಿಯ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದು, ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೋಳಾರ್ ಹಾಸ್ಯದ ಹೊನಲು ಹರಿಸಲಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಹಾಗೂ ತನ್ವಿ ರಾವ್ ಮತ್ತು ವೆನ್ಯ ರೈ ನಾಯಕಿಯರಾಗಿ ನಟಿಸಿದ್ದಾರೆ. ಲಕ್ಷ್ಮಣ್ ಕುಮಾರ್ ಮಲ್ಲೂರು, ಶೋಭರಾಜ್ ಪಾವೂರು, ಚೇತನ್ ರೈ ಮಾಣಿ ಸೇರಿದಂತೆ ಹಲವು ಅನುಭವಿ ನಟರು ತಾರಾಗಣದಲ್ಲಿದ್ದಾರೆ ಎಂದರು. ಈ ಚಿತ್ರಕ್ಕೆ ಹೈ-ಬಜೆಟ್ ಸಿನಿಮಾಗಳಲ್ಲಿ ಬಳಸುವ “ಂಡಿಡಿi ಐಈ” ವಿಶೇಷ ಕ್ಯಾಮೆರಾವನ್ನು ಬಳಸಲಾಗಿದೆ. ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ‘ಸವಾರಿ’ ಖ್ಯಾತಿಯ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು, ವಿಘ್ನೇಶ್ ಹಾಗೂ ಮೈಮ್ ರಾಮದಾಸ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರಮುಖ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸ್ಟಂಟ್ ಮಾಸ್ಟರ್ ಟೈಗರ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ ಎಂದು ವಿವರಿಸಿದರು. 

ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡಿ, ಮೊದಲ ಬಾರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಿರ್ದೇಶನ ಸಾಕಷ್ಟು ಸವಾಲಿನ ಕೆಲಸವಾಗಿದ್ದು, 50 ದಿನಗಳಲ್ಲಿ ಚಿತ್ರೀಕರಣ ನಡೆದಿದೆ. ವಾಲಗ ಮಂಡಳಿಯ ಸುತ್ತ ಹೆಣೆಯಲಾದ ಚಿತ್ರ ಉತ್ತಮ ಸಂದೇಶದ ಎಳೆಯೊಂದಿಗೆ ಹಾಸ್ಯಮಯವಾಗಿ, ಸಾಕಷ್ಟು ತಿರುವುಗಳನ್ನು ಹೊಂದಿದೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದೆ. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಜೊತೆ ಬ್ಯಾಂಕ್‌ನ ನಿರ್ದೇಶಕರುಗಳೂ ಸರ್ವ ರೀತಿಯ ಸಹಕಾರ ನೀಡಿರುವುದರಿಂದ ಚಿತ್ರದ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.

ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಅರ್ಜುನ್ ವೇದಾಂತ್, ವೆನ್ಯ ರೈ, ಮೈಮ್ ರಾಮದಾಸ್, ರಾಜೇಶ್ ಕುಡ್ಲ, ಶೋಭರಾಜ್ ಪಾವೂರು, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಮೇಘರಾಜ್ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಳ್ಯೊಟ್ಟು ಮೊದಲಾದವರಿದ್ದರು. 


ಮನೋರಂಜನಾ ಪ್ಯಾಕೇಜ್..

‘ಈ ಚಿತ್ರದ ಕಥೆ ತುಂಬಾ ಇಷ್ಟವಾಯಿತು. ನಿರ್ದೇಶಕರು ಕಥೆ ಹೇಳುತ್ತಿದ್ದಂತೆಯೇ ಒಪ್ಪಿಗೆ ನೀಡಿದೆ. ಕರಾವಳಿ ಕನ್ನಡದದ ಸೊಗಡಿದ್ದರೂ ರಾಜ್ಯದ ಎಲ್ಲ ಭಾಗದ ಪ್ರೇಕ್ಷಕರಿಗೂ ಈ ಸಿನಿಮಾ ತಲುಪುತ್ತದೆ ಎಂಬ ವಿಶ್ವಾಸ ಇದೆ. ಚಿತ್ರವು ಹಾಸ್ಯ ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಟ್ಟುಗೂಡಿಸಿ ಮನೋರಂಜನಾ ಪ್ಯಾಕೇಜ್ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರು ಕುಟುಂಬ ಸಹಿತ ನೋಡಬಹುದಾದ ಹಾಸ್ಯಮಯ ಸಿನಿಮಾ ಆಗಿ ರೂಪುಗೊಂಡಿದೆ. ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆಯೂ ಇದೆ. -ಡಾ. ಎಂ.ಎನ್. ರಾಜೇಂದ್ರ ಕುಮಾರ್.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article