ರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಹಾಗೂ ಎಲ್ಪಿಜಿ/ಸಿಎನ್ಜಿ ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ
ಈ ಮನವಿಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ವಹಿಸಿದ್ದರು.
ಇತ್ತೀಚಿನ ಜಾಗತಿಕ ಪರಿಸ್ಥಿತಿ ಹಿನ್ನೆಲೆ ಇಂಧನದ ಬೆಲೆ ಏರಿಕೆ ಹಾಗೂ ಎಲ್ಪಿಜಿ/ಸಿಎನ್ಜಿ ಗ್ಯಾಸ್ ಅಭಾವವು ರಿಕ್ಷಾ ಕಾರ್ಮಿಕರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂಧನ ವೆಚ್ಚ, ವಾಹನ ನಿರ್ವಹಣಾ ಖರ್ಚು, ಇನ್ಸುರನ್ಸ್ ಹಾಗೂ ಸ್ಪೇರ್ ಪಾರ್ಟ್ಸ್ ವೆಚ್ಚಗಳ ಹೆಚ್ಚಳದಿಂದ, ಪ್ರಸ್ತುತ ಇರುವ ಬಾಡಿಗೆ ದರಗಳಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಿಕ್ಷಾ ಬಾಡಿಗೆ ದರವನ್ನು ತಕ್ಷಣ ಪರಿಷ್ಕರಿಸುವುದು, ಎಲ್ಪಿಜಿ/ಸಿಎನ್ಜಿ ಗ್ಯಾಸ್ ಸರಬರಾಜನ್ನು ಸುಧಾರಿಸುವುದು ಹಾಗೂ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಅವರು ಎಲ್ಲಾ ರಿಕ್ಷಾ ಬಂಧುಗಳ ಪರವಾಗಿ ಸಮಸ್ಯೆಗಳ ಗಂಭೀರತೆಯನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು. ರಿಕ್ಷಾ ಚಾಲಕರು ಎದುರಿಸುತ್ತಿರುವ ದಿನನಿತ್ಯದ ಸಂಕಷ್ಟಗಳು, ಆದಾಯ-ಖರ್ಚಿನ ಅಸಮತೋಲನ, ಗ್ಯಾಸ್ ಅಭಾವದಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ಬಾಡಿಗೆ ದರ ಪರಿಷ್ಕರಣೆಯ ಅಗತ್ಯತೆಯನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮನವಿಗೆ ಸ್ಪಂದಿಸಿ, ಒಂದು ವಾರದ ಒಳಗಾಗಿ ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಎಂಎಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಉಪಾಧ್ಯಕ್ಷರಾದ ರೋಹಿತಾಶ್ವ, ನಾರಾಯಣ ಪೂಜಾರಿ, ಜಿಲ್ಲೆಯ ಆಯಾಯ ತಾಲೂಕಿನ ಪದಾಧಿಕಾರಿಗಳಾದ ಹೇಮಂತ್ (ಪುತ್ತೂರು), ಸಚಿನ್ (ಪುತ್ತೂರು), ಸೀತಾರಾಮ್ (ಪುತ್ತೂರು), ಪ್ರಕಾಶ್ (ಸುಳ್ಯ), ರವಿ (ಸುಳ್ಯ), ಕರುಣಾಕರ ಗೌಡ (ಸುಳ್ಯ), ಶ್ರೀಕಾಂತ್ (ಬಂಟ್ವಾಳ), ಪರಮೇಶ್ವರ್, ನವೀನ್ (ಬಂಟ್ವಾಳ), ಸತೀಶ್ (ಬಂಟ್ವಾಳ), ದಿನೇಶ್ (ಬಂಟ್ವಾಳ), ಸುರೇಶ್ (ಬಂಟ್ವಾಳ) ಹಾಗೂ ವಿವಿಧ ತಾಲೂಕು ರಿಕ್ಷಾ ಯೂನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.