ತಡರಾತ್ರಿ ದೇವಸ್ಥಾನದ ಹೆಂಚು ತೆಗೆದು ದಾಂಧಲೆ ನಡೆಸಿ ಮೂರ್ತಿ ಭಗ್ನ
ಬುಧವಾರ ರಾತ್ರಿ ಸುಮಾರು ಎರಡು ಗಂಟೆ ವೇಳೆಗೆ ಕಪ್ಪು ಬಣ್ಣದ ಧಾರ್ ವಾಹನದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದ ಅಜೇಯ್ ಎಂಬ ಕಿಡಿಗೇಡಿ ‘ಎನನ್ ಬಚಾವ್ ಮಲ್ಪಿ’ ಎಂದು ಜೋರಾಗಿ ಕೂಗಾಡಿ ಮನೆಗೆ ನುಗ್ಗಲು ಎತ್ನಿಸಿದಾಗ ಮನೆಯರು ಜೋರು ಮಾಡಿದ ವಿಚಾರ ಬೆಳಕಿಗೆ ಬಂದಿದೆ.
ಬಳಿಕ ಕೀಡಿಗೇಡಿ ಬಳಂಜ ದೇವಸ್ಥಾನದ ಪವಿತ್ರವಾದ ದೇವರ ಜಳಕದ ಕೆರೆಗೆ ಹಾರಿ ಅಲ್ಲಿಂದ ನೇರವಾಗಿ ದೇವಸ್ಥಾನಕ್ಕೆ ಬಂದು ಕಂಬದ ಮೂಲಕ ಮೇಲೆ ಹೋಗಿ ಹೆಂಚು ತೆಗೆದು ಒಳನುಗ್ಗಿ ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು, ದೈವದ ಮಣೆ, ಮಂಚದಲ್ಲಿದ್ದ ಘಂಟಾಮಣಿಯನ್ನು ತೆಗೆದು ದೇವಸ್ಥಾನ ಮೇಲ್ಚಾವಣಿಯಲ್ಲಿ ಹೆಂಚುಗಳ ಪಕ್ಕದಲ್ಲಿಟ್ಟು ವಿಕೃತಿ ಮೆರೆದಿದ್ದಾನೆ.
ಬಳಿಕ ದೇವಸ್ಥಾನದ ತೀರ್ಥ ಮಂಟಪದ ಬಳಿಯಿರುವ ದೊಡ್ಡ ಘಂಟೆಯನ್ನು ಬಾರಿಸಿ, ಗೋಪಾಲಕೃಷ್ಣ ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹವನ್ನು ನೆಲಕ್ಕೆಸೆದು ಭಗ್ನಗೊಳಿಸಿದ್ದಾನೆ. ಗುಡಿಯೊಳಗಿದ್ದ ದೇವರ ಪೂಜಾ ಪರಿಕರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ದಾಂಧಲೆ ನಡೆಸಿದ್ದಾನೆ.
ಈ ಘಟನೆಯನ್ನು ಕಿಡಿಗೇಡಿಯ ಮನೆಯವರಿಗೆ ಮತ್ತು ಸ್ಥಳಿಯ ನಿವಾಸಿ ನಿತ್ಯಾನಂದ ಹೆಗ್ಡೆಯವರಿಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರ್ಚಕ ರಾಘವೇಂದ್ರ ಭಟ್ ತಿಳಿಸಿ, ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ. ಶೀತಲ್ ಪಡಿವಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಯಿಂದ ಭಕ್ತ ವರ್ಗದಲ್ಲಿ ದಿಗ್ರಮೆ ಮೂಡಿದ್ದು, ಆತಂಕ ಉಂಟಾಗಿದೆ. ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಕಿಡಿಗೇಡಿ ಕೃತ್ಯಕ್ಕೆ ತಕ್ಕ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇತ್ತಿಚೀನ ದಿನಗಳಲ್ಲಿ ತಡ ರಾತ್ರಿ ತಿರುಗಾಡುವ ವಾಹನಗಳು, ಗಾಂಜಾ, ಡ್ರಗ್ಸ್ ಅಪರಾಧಗಳು ಹೆಚ್ಚುತ್ತಿರುವ ಕುರಿತು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಪ್ಪು ಬಣ್ಣದ ಥಾರ್ ವಾಹನ ಇದೀಗ ಸುಬ್ರಹ್ಮಣ್ಯ ಭಟ್ ಅವರ ಮನೆಯಂಗಳದಲ್ಲಿದೆ.