ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಒಂದು ದಿನದ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’ ವಿಚಾರ ಸಂಕಿರಣ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ,, ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವುಗಳ ಸಹಯೋಗದೊಂದಿಗೆ ಒಂದು ದಿನದ ರೈತ ವಿಜ್ಞಾನಿಗಳ ವಿಚಾರ ಸಂಕಿರಣ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’ ಎಪ್ರಿಲ್ 18ರಂದು ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಕಾಸರಗೋಡಿನ ಕೇಂದ್ರೀಯ ತೋಟಪಟ್ಟಿ ಬೆಳೆಗಳ ಸಂಶೋಧನಾ ಸಂಸ್ಥೆಯ, ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ ಕೇಂದ್ರ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್, ಮೂಡುಬಿದಿರೆಯ ಮಂಗಳೂರು ಕೃಷಿ ಒಕ್ಕೂಟ ಉತ್ಪಾದಕರ ಕಂಪನಿ ಲಿಮಿಟೆಡ್ನ ವ್ಯವಸ್ಥಾಪನಾ ನಿರ್ದೇಶಕ ಸುನಿಲ್ ಸೋನ್ಸ್, ಮಂಗಳೂರಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ ಪ್ರವೀಣ್, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ವಹಿಸಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕುರಿತಂತೆ ನುರಿತ ಕೃಷಿ ವಿಜ್ಞಾನಿಗಳು ಮತ್ತು ತಜ್ಞರು ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಮಹೇಂದ್ರಕರ್ ಶ್ರೀನಿವಾಸರಾವ್ ಮಣ್ಣಿನ ಮಹತ್ವ ಹಾಗೂ ಜೈವಿಕ ಗೊಬ್ಬರಗಳ ಪಾತ್ರ, ಕುಂದಾಪುರದ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವಸಾಂಬಾರು ಉತ್ಪಾದಕರ ಕಂಪನಿ ಲಿಮಿಟೆಡ್ನ ಅಧ್ಯಕ್ಷ ಸತ್ಯನಾರಾಯಣ ಉಡುಪ ಮತ್ತು ಮೂಡುಬಿದಿರೆಯ ಮಂಗಳೂರು ಕೃಷಿ ಒಕ್ಕೂಟ ಉತ್ಪಾದಕರ ಕಂಪನಿ ಲಿಮಿಟೆಡ್ನ ವ್ಯವಸ್ಥಾಪನಾ ನಿರ್ದೇಶಕ ಸುನಿಲ್ ಸೋನ್ಸ್- ಕಲ್ಪರಸ ಉತ್ಪಾದನಾ ತಾಂತ್ರಿಕತೆ, ಪುತ್ತೂರಿನ ಡಿ.ಸಿ.ಆರ್. ವಿಜ್ಞಾನಿ ಡಾ. ಮಂಜೇಶ ಜಿ.ಎನ್. ಕರಾವಳಿ ಪ್ರದೇಶಕ್ಕೆ ಸೂಕ್ತ ಪರ್ಯಾಯ ಬೆಳೆಗಳು ಹಾಗೂ ಸುಂಟಿಕೊಪ್ಪ ಗರ್ವಾಲೆ ಗ್ರಾಮದ ತಳಿ ಸಂರಕ್ಷಕ ಪೂಣಚ್ಚ ನಾಪಂಡ-ಕಾಳುಮೆಣಸು ಬೆಳೆಯ ದೇಸಿ ತಳಿಗಳ ಪರಿಚಯ, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಮತ್ತು ಅದರ ಪ್ರಾಯೋಗಿಕತೆ, ಇತ್ಯಾದಿ ವಿಷಯಗಳನ್ನು ಒಳಗೊಂಡಂತೆ ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಕರಾವಳಿ ಪ್ರದೇಶದ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ. ಪ್ರಮುಖರಾದ ಡಾ ವಾಸುದೇವ್ ನಭಿರಾಜ್, ಡಾ ಸುರೇಶ್, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಧನಂಜಯ ಕುಲಾಲ್, ಸಂದೀಪ ಪೂಜಾರಿ, ಜಿನೇಂದ್ರ ಜೈನ್, ಸುಭಾಷ್ಚಂದ್ರಚೌಟ ಇದ್ದರು.