ರಾ.ಹೆ. ಅಸಮಪ೯ಕ ಕಾಮಗಾರಿ: ಸರಿಪಡಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ
Sunday, April 26, 2026
ಮೂಡುಬಿದಿರೆ: ಇದೀಗ ಮಳೆಗಾಲ ಸಮೀಪಿಸುತ್ತಿದ್ದು ತೋಡಾರು ಯೇನಪೋಯ ಇಂಜಿನಿಯರಿಂಗ್ ಕಾಲೇಜು ಜಂಕ್ಷನ್ನಿಂದ ಮಿಜಾರು ಬೆಳ್ಳೆಚ್ಚಾರು ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ರಾ. ಹೆ. ಕಾಮಗಾರಿಯ ದಿಲೀಪ್ ಬಿಲ್ಡ್ಕಾನ್ ಲಿಮಿಟೆಡ್ನ ನಿರ್ಮಾಣ ವ್ಯವಸ್ಥಾಪಕರಿಗೆ ತೋಡಾರು-ಮಿಜಾರು ಗ್ರಾಮಸ್ಥರು ಭಾನುವಾರ ಮನವಿ ಸಲ್ಲಿಸಿದರು.
ಈ ಭಾಗದಲ್ಲಿ ಮೂರು ಇಂಜಿನಿಯರಿಂಗ್ ಕಾಲೇಜುಗಳಿದ್ದು, ಸುಮಾರು 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾರಕ್ಕೆ ಕನಿಷ್ಠ 3 ರಿಂದ 4 ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ರಸ್ತೆ ತಿರುವುಗಳ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಬೇಕು ಹಾಗೂ ಸುಗಮ ಸಂಚಾರಕ್ಕಾಗಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ರಸ್ತೆಯಲ್ಲೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿರುವುದಲ್ಲದೆ, ನೀರು ಸಮೀಪದ ಮನೆಗಳಿಗೆ ನುಗ್ಗಿ ಹಾನಿ ಉಂಟು ಮಾಡುವ ಸಂಭವವಿದೆ. ಬೆಳ್ಳೆಚ್ಚಾರು ಕ್ರಾಸ್ ಬಳಿ ರಾತ್ರಿ ವೇಳೆ ದಾರಿ ಕಾಣದೆ ಸವಾರರು ಪರದಾಡುತ್ತಿದ್ದು, ಕೂಡಲೇ ಅಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಮಳೆಗಾಲ ಆರಂಭವಾಗುವ ಮೊದಲು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಗ್ರಾಮಸ್ಥರು.
ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ಸುಧಾಕರ್ ಪೂಂಜ ಮಿಜಾರು, ರಾಮಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ, ,ಜಮೀರ್ ತೋಡಾರು, ರಿಕ್ಷಾ ಚಾಲಕ-ಮಾಲಕರು, ಗ್ರಾಮಸ್ಥರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
