ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೂಡುಬಿದಿರೆ ಪೊಲೀಸರ ವಶಕ್ಕೆ
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಮಿಜಾರು ಗ್ರಾಮದ ನಿವಾಸಿ ಕೆ. ಅಬ್ದುಲ್ ಬಶೀರ್ ಅಲಿಯಾಸ್ ಅರ್ಗ ಬಶೀರ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. 50 ವರ್ಷ ಪ್ರಾಯದ ಅಬ್ದುಲ್ ಬಶೀರ್ ವಿರುದ್ಧ ನ್ಯಾಯಾಲಯವು ದಸ್ತಗಿರಿ ಹಾಗೂ ಉದ್ಗೋಷಣ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗುವ ಭಯದಿಂದ ಈತ ತನ್ನ ಕುಟುಂಬದೊಂದಿಗೆ ತೆಂಕಮಿಜಾರು ಗ್ರಾಮವನ್ನು ಬಿಟ್ಟು ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದನು.
ಖಚಿತ ಮಾಹಿತಿಯ ಮೇರೆಗೆ ದಿನಾಂಕ ಏ.18ರಂದು ಸಂಜೆ 7:30 ಗಂಟೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಗೋಹತ್ಯೆ ನಿಷೇಧ ಕಾಯ್ದೆ, ಜಾನುವಾರು ಸಂರಕ್ಷಣಾ ಕಾಯ್ದೆ, ಕೊಲೆ ಯತ್ನ, ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಮೂಡುಬಿದಿರೆ ಠಾಣೆಯಲ್ಲಿ 7, ಬಜ್ಪೆ ಠಾಣೆಯಲ್ಲಿ 5, ಮಂಗಳೂರು ಗ್ರಾಮಾಂತರ, ಧರ್ಮಸ್ಥಳ ಮತ್ತು ಬೆಳ್ತಂಗಡಿ ಠಾಣೆಗಳಲ್ಲಿ ತಲಾ ಒಂದು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಮೇಲಾಧಿಕಾರಿಗಳ ನಿರ್ದೇಶನದಂತೆ ಮೂಡುಬಿದಿರೆ ಪೊಲೀಸರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.