ಸಂತ ಫಿಲೋಮಿನಾ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವ

ಸಂತ ಫಿಲೋಮಿನಾ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವವನ್ನು ಏಪ್ರಿಲ್ 28ರಂದು ಕಾಲೇಜಿನ ಎಸ್‌ಜೆಎಂ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನೀವು ಈ ಸಂಸ್ಥೆಯ ಹೃದಯವಿದ್ದಂತೆ. ಇಲ್ಲಿ ನಿಮಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗಿದೆ, ಈ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ನೀವು ಉತ್ತಮ, ಸೃಜನಶೀಲ ಮತ್ತು ಕ್ರಿಯಾಶೀಲ ವಿದ್ಯಾರ್ಥಿಗಳಾಗಿರುವುದಕ್ಕಾಗಿ ನಾವೆಲ್ಲರೂ ನಿಮ್ಮನ್ನು ಅಭಿನಂದಿಸುತ್ತೇವೆ. ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದದ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. 


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನೀವೆಲ್ಲರೂ ಯುವ ಪೀಳಿಗೆಯವರು. ಹಿಂದೆ ನಿರುದ್ಯೋಗದ ಸಮಸ್ಯೆ ಹೆಚ್ಚಿತ್ತು, ಆದರೆ ಈಗ ಕೆಲಸಕ್ಕೆ ಜನರ ಕೊರತೆ ಉಂಟಾಗಿದೆ. ಕೆಲವು ಕಡೆಗಳಲ್ಲಿ ಕೆಲಸ ಮಾಡಲು ಜನರಿದ್ದರೂ ಸಹ ಅವರಲ್ಲಿ ಕೌಶಲ್ಯದ ಕೊರತೆಯಿದೆ. ಆದ್ದರಿಂದ ಪ್ರಾಯೋಗಿಕ ಜ್ಞಾನ ಬಹಳ ಮುಖ್ಯ. ನಿಮ್ಮಲ್ಲಿ ಕೌಶಲ್ಯ ವೃದ್ಧಿಯಾಗಬೇಕು, ಕೌಶಲ್ಯವಿದ್ದರೆ ಯಾವುದೇ ಸವಾಲನ್ನು ನಿಭಾಯಿಸಬಹುದು.ಶಿಕ್ಷಣದ ಜೊತೆಗೆ ಪ್ರಾಯೋಗಿಕವಾಗಿಯೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಪರಿಪೂರ್ಣನಾಗುವುದು ಒಳ್ಳೆಯ ಆರೋಗ್ಯ, ಉತ್ತಮ ವಿದ್ಯಾಭ್ಯಾಸ ಮತ್ತು ಗೌರವಯುತ ಉದ್ಯೋಗವಿದ್ದಾಗ ಮಾತ್ರ. ವಿದ್ಯಾರ್ಥಿಗಳಲ್ಲಿ ನಿಷ್ಠೆ, ಸರಿಯಾದ ಯೋಜನೆ  ಮತ್ತು ಗುರಿ ಇದ್ದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಕವಿತಾ ಕೆ.ಆರ್. ಮಾತನಾಡಿ, ಅವಕಾಶಗಳನ್ನು ಬಳಸಿಕೊಳ್ಳಲು ನೀವು ಬಹಳ ವೇಗವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು, ನಾವು ಮೊದಲು ರೂಢಿಸಿಕೊಳ್ಳಬೇಕಾದ ಗುಣವಿದು. ಜಗತ್ತು ವೇಗವಾಗಿ ಬದಲಾಗುತ್ತಿದೆ. ಕಾಲೇಜುಗಳು ನೀವು ಬೆಳೆಯಲು ಮತ್ತು ಉತ್ತಮ ವ್ಯಕ್ತಿಯಾಗಲು ಅವಕಾಶಗಳನ್ನು ನೀಡುತ್ತವೆ, ಆದ್ದರಿಂದ ನಿಮ್ಮಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಇರಲೇಬೇಕು. ಬದಲಾಗುತ್ತಿರುವ ಜಗತ್ತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ನೀವು ದಾರಿ ತಪ್ಪುತ್ತೀರಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಾರ್ಷಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. 

ಪಿಎಚ್.ಡಿ. ಪದವಿ ಪಡೆದ ಡಾ. ವಿನಯಚಂದ್ರ, ಡಾ. ಗೀತಾ ಪೂರ್ಣಿಮ ಕೆ. ಮತ್ತು ಡಾ. ಭಾರತಿ ಎಸ್. ರೈ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಎನ್‌ಸಿಸಿ ನೌಕಾದಳದ ಅಧಿಕಾರಿಯಾಗಿ ‘ಸಬ್ ಲೆಫ್ಟಿನೆಂಟ್’ ಶ್ರೇಣಿಗೆ ಆಯ್ಕೆಯಾದ ತೇಜಸ್ವಿ ಭಟ್ ಕೆ. ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಮೈಸೂರಿನಲ್ಲಿ ನಡೆದ ರಾಷ್ಟೀಯ ಏಕತಾ ಶಿಬಿರದಲ್ಲಿ ಭಾಗವಹಿಸಿದ ಡಾ. ಕೆ. ಚಂದ್ರಶೇಖರ್ ಅವರನ್ನು ಸನ್ಮಾನಿಸಿ, ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತಿರ್ನರಾದ ಉಪನ್ಯಾಸಕ ಮತ್ತು ವಿದ್ಯಾರ್ಥಿಯರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಅಶೋಕ್ ರಾಯನ್ ಕ್ರಾಸ್ತ ಅವರು ಗೌರವ ಅತಿಥಿಗಳಾಗಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ಅಬೂಬಕ್ಕರ್ ಅರ್ಲಪದವು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಸ್ವಾಗತಿಸಿ, ಕಾಲೇಜಿನ ಶೈಕ್ಷಣಿಕ ರಿಜಿಸ್ಟ್ರಾರ್ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಪೂಜಾಶ್ರೀ ವಿ. ರೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article