ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ
ಉಜಿರೆ: ಮುಂಡಾಜೆ ಗ್ರಾಮದ ನಿಡಿಗಲ್ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ಏ.24 ರಂದು ಮುಂಜಾನೆ ನಡೆದಿದೆ.
ಬೆಳಗಿನ ಜಾವ ಪೂಜೆಗೆಂದು ಆಗಮಿಸಿದ ಅರ್ಚಕ ಸತ್ಯನಾರಾಯಣ ಭಟ್ ದೇವಸ್ಥಾನದ ಬಾಗಿಲು ತೆಗೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಒಳಗೆ ಇರುವುದು ತಿಳಿದ ಅರ್ಚಕರು ಸ್ಥಳೀಯ ನಿವಾಸಿಯನ್ನು ಕರೆದುಕೊಂಡು ಬರುವ ವೇಳೆ ಕಳ್ಳರು ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ದೇವಸ್ಥಾನದ ಚಾವಣಿಯ ಹಂಚನ್ನು ಸರಿಸಿ ಲುಂಗಿಯನ್ನು ಚಾವಣಿಯ ಪಕ್ಕಾಸಿಗೆ ಕಟ್ಟಿ ಕಳ್ಳರು ಒಳಗೆ ನುಗ್ಗಿ, ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದಾರೆ. ಅಂದಾಜು 4 ಸಾವಿರ ರೂ. ಕಳ್ಳತನ ಆಗಿರುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿಯ ತೀರಾ ಸನಿಹದಲ್ಲಿದ್ದು, ಪರಿಸರದಲ್ಲಿ ಸಾಕಷ್ಟು ಮನೆಗಳೂ ಇವೆ. ಆದರೂ ಕಳ್ಳರು ಯಾವುದೇ ಎಗ್ಗಿಲ್ಲದೆ ದೇವಸ್ಥಾನದ ಒಳಗೆ ನುಗ್ಗಿದ್ದಾರೆ.
ಇಲ್ಲಿಂದ ಸುಮಾರು ಒಂದು ಕಿ.ಮೀ. ದೂರದ ಕನ್ಯಾಡಿ ಗ್ರಾಮದ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದದಲ್ಲಿ ಎರಡು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಈ ವೇಳೆ ಕಾಣಿಕೆ ಡಬ್ಬಿಗಳನ್ನು ಕಳ್ಳರು ದೋಚಿದ್ದು ಸುಮಾರು 30 ಸಾವಿರ ರೂ.ನಷ್ಟು ಹಣ ಕಳ್ಳತನವಾಗಿತ್ತು. ಈ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.