ಮಂಗಳೂರಿನಲ್ಲಿ ಶೀಘ್ರದಲ್ಲೇ ಬೀದಿದೀಪಗಳ ಸ್ವಯಂಚಾಲಿತ ನಿರ್ವಹಣೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿ ಈ ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 66,000 ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಬೇಕಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಪಾಲಿಕೆಯ ಅರ್ಧದಷ್ಟು ವಾರ್ಡ್ಗಳನ್ನು ಕಂಟ್ರೋಲ್ ರೂಂನಡಿ ಸಮಗ್ರ ವ್ಯವಸ್ಥೆಗೊಳಪಡಿಸಿ ಬೀದಿ ದೀಪಗಳ ಉರಿಸುವ ಮತ್ತು ನಂದಿಸುವ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯಲಿದೆ. ಲೈನ್ ಮೆನ್ಗಳ ಕೊರತೆಯಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಬೇಕಾದ ಕಾರಣ ಕೆಲವೆಡೆ ಬೆಳಗ್ಗಿನ ಹೊತ್ತು ಬೀದಿದೀಪ ಉರಿಯುವ ಸಮಸ್ಯೆ ಇದೆ. ಈ ಸ್ವಯಂಚಾಲಿತ ವ್ಯವಸ್ಥೆಯಿಂದ ಈ ಸಮಸ್ಯೆ ನಿವಾರಣೆ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೀರಿನ ಬಿಲ್ ಬಾರದೆ ವರ್ಷವಾಗಿದೆ!
ಬಂಗ್ರ ಕೂಳೂರಿನ ಪ್ರವೀಣ್ ಕುಮಾರ್ ಎಂಬವರು ಕರೆ ಮಾಡಿ ನೀರಿನ ಬಿಲ್ ಬಾರದೆ ಒಂದು ವರ್ಷವಾಗಿದೆ ಎಂದಾಗ, ಬಿಲ್ ಕಟ್ಟಲು ಸಿದ್ಧವಿದ್ದರೂ ಯಾಕೆ ಬಿಲ್ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇಗ್ನೇಶಿಯಸ್ ಡಿಸೋಜ ಎಂಬವರು ಮಳೆ ನೀರು ಚರಂಡಿಯಲ್ಲಿ ಕೊಳಚೆ ನೀರು ಬಿಡಲಾಗುತ್ತಿದೆ ಎಂದು ಆಕ್ಷೇಪಿಸಿದರೆ, ಎಕ್ಕೂರಿನಿಂದ ಬಜಾಲ್ ಹೋಗುವ ರಸ್ತೆಯ ಬಲ ಭಾಗದಲ್ಲಿ ಸಂಜೆ ಕೆಲವೊಂದು ಬೀದಿಬದಿ ವ್ಯಾಪಾರ ನಡೆಯುತ್ತಿದ್ದು, ಇಲ್ಲಿ ದಾರಿ ಬ್ಲಾಕ್ ಮಾಡಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ರಾಮಚಂದ್ರ ಎಕ್ಕೂರು ಎಂಬವರು ದೂರಿದರು.
ಫೆಲಿಕ್ಸ್ ವಾಮಂಜೂರು ಎಂಬವರು ಕರೆ ಮಾಡಿ, ಮಂಗಳಜ್ಯೋತಿಯಿಂದ ವಾಮಂಜೂರುವರೆಗೆ ರಾ.ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ಕ್ರಾಸಿಂಗ್ ವ್ಯವಸ್ಥೆ ನೀಡದ ಕಾರಣ ಅಲ್ಲಿನ ಶಾಲೆ, ಚರ್ಚ್ಗಳಿಗೆ ಬರುವ ಸಾವಿರಾರು ಮಕ್ಕಳು ಹಾಗೂ ಸಾರ್ವಜನಿಕರು ಸುತ್ತು ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಇದೆ ಎಂದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಬಹುತೇಕವಾಗಿ ಒಳಚರಂಡಿ ಅವ್ಯವಸ್ಥೆಗಳ ಕುರಿತಂತೆಯೇ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಯಿತು.