ನೇತ್ರಾವತಿ ನದಿಯಲ್ಲಿ ತೇಲಿ ಬಂದ ಅಪರಿಚಿತ ಗಂಡಸಿನ ಶವ
ಬಂಟ್ವಾಳ: ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಗಂಡಸಿನ ಶವ ಕಂಡು ಬಂದ ಹಿನ್ನಲೆಯಲ್ಲಿ ಗಮನಿಸಿದವರು ಯಾರೋ ನೇರವಾಗಿ ಈಜುಗಾರ ಈಶ್ವರ ಮಲ್ಪೆಯವರಿಗೆ ಮಾಹಿತಿ ನೀಡಿದ್ದು, ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದರು.
ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಶವವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ, ಸ್ಥಳೀಯ ನೇತ್ರಾವತಿ ವೀರರಾದ ನಿಶಾರ್, ಎಂ.ಕೆ. ಇಬ್ರಾಹಿಂ ಅವರು ಶವವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಘಾತದಿಂದ ಕಾಲಿಗೆ ನೋವಾಗಿದ್ದರೂ ಕೂಡ ಇದನ್ನು ಲೆಕ್ಕಿಸದೆ ಶವವನ್ನು ಮೇಲಕ್ಕೆತ್ತುವಲ್ಲಿ ಇವರು ತೋರಿದ ಸಾಹಸ, ಮಾನವೀಯ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲು ಈ ವೀಡಿಯೋ ವೈರಲ್ ಆಗಿದೆ.
ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರೀಸುದಾರರಿದ್ದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.