ಧಾರ್ಮಿಕ ಸಂಸ್ಕಾರಗಳಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ: ಕುಂಭಾಶಿಯಲ್ಲಿ ಶೃಂಗೇರಿ ಜಗದ್ಗುರುಗಳ ಆಶೀರ್ವಚನ
ಕುಂದಾಪುರ ತಾಲೂಕಿನ ಕುಂಭಾಶಿ ಆನೆಗುಡ್ಡೆಯ ನಾಗಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ (ಶೃಂಗೇರಿ ಶಂಕರ ಮಠ) ಮೇ 3 ಮತ್ತು 4 ರಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ನೂತನ ರಥ ಸಮರ್ಪಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಧಿಕಾರ ಎಂಬುದು ಕರ್ತವ್ಯದ ಸ್ಥಾನ: ರಾಜಕಾರಣಿಗಳಿಗೆ ಕಿವಿಮಾತು
ರಾಮಾಯಣದ ಆದರ್ಶಗಳನ್ನು ಉಲ್ಲೇಖಿಸಿದ ಶ್ರೀಗಳು, "ಅಧಿಕಾರ ಎನ್ನುವುದು ಕೇವಲ ಆಸೆಯಲ್ಲ ಅದೊಂದು ಪವಿತ್ರ ಕರ್ತವ್ಯದ ಸ್ಥಾನ. ಪಟ್ಟಾಭಿಷೇಕದ ಸಂಭ್ರಮ ಹಾಗೂ ವನವಾಸದ ಸವಾಲು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ ಶ್ರೀರಾಮನ ಮನಸ್ಥಿತಿ ನಮಗೆ ಮಾದರಿಯಾಗಬೇಕು. ಸಾರ್ವಜನಿಕ ಜೀವನದಲ್ಲಿ ಇರುವವರು ಅಧಿಕಾರದ ಆಸೆಗೆ ಬಲಿಯಾಗದೆ, ಸೂರ್ಯನು ಉದಯ ಹಾಗೂ ಅಸ್ತಮಯ ಕಾಲದಲ್ಲಿ ಏಕರೂಪವಾಗಿರುವಂತೆ, ಸುಖ-ದುಃಖಗಳಲ್ಲಿ ಸ್ಥಿತಪ್ರಜ್ಞರಾಗಿ ಕರ್ತವ್ಯ ಪಾಲಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ‘ಶ್ರೀ ಭಾರತಿ ತೀರ್ಥ ಪುರಸ್ಕಾರ’:
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶೃಂಗೇರಿ ಪೀಠದ ಪರಮ ಭಕ್ತರಾದ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಯವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ 'ಶ್ರೀ ಭಾರತೀತೀರ್ಥ ಪುರಸ್ಕಾರ' ನೀಡಿ ಗೌರವಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ನೂತನ ರಥವನ್ನು ಸಮರ್ಪಿಸಿದ ಮಂಜರ ಭಕ್ತಿಯನ್ನು ಶ್ರೀಗಳು ಶ್ಲಾಘಿಸಿದರು.
ಸೇವೆಯ ಪಥದಲ್ಲಿ ಅಡಿಗ ಸಹೋದರರು:
ಆನೆಗುಡ್ಡೆ ಶೃಂಗೇರಿ ಶಂಕರ ಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ ಹಾಗೂ ಅವರ ಸಹೋದರರಾದ ಲಕ್ಷ್ಮೀಶ ಅಡಿಗ, ನಾಗೇಂದ್ರ ಅಡಿಗ ಮತ್ತು ಮಂಜುನಾಥ ಅಡಿಗ ಅವರ ನಿಸ್ವಾರ್ಥ ಸೇವೆಯನ್ನು ಶ್ರೀಗಳು ಈ ಸಂದರ್ಭದಲ್ಲಿ ಶ್ಲಾಘಿಸಿ ಆಶೀರ್ವದಿಸಿದರು.
ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ 'ಬೇಸಿಗೆ ಸಂಸ್ಕಾರ ಶಿಬಿರ' ಹಾಗೂ 'ಶಂಕರ ತತ್ವ ಪ್ರಸಾರ ಸ್ಪರ್ಧೆ'ಗಳು ಭಕ್ತರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಶೃಂಗೇರಿ ಪೀಠದ ಆಡಳಿತಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ರಥೋತ್ಸವದ ಪುಣ್ಯ ಕೈಂಕರ್ಯದಲ್ಲಿ ಭಾಗಿಯಾದರು.
ಶಂಕರ ಮಠದ ಧರ್ಮಾಧಿಕಾರಿ ಲೋಕೇಶ್ ಅಡಿಗ ಸ್ವಾಗತಿಸಿ, ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.