ಮೇ.28 ರಿಂದ 31 ರವರೆಗೆ ಕದ್ರಿ ಉದ್ಯಾನವನದಲ್ಲಿ ಮಾವು ಮೇಳ

ಮೇ.28 ರಿಂದ 31 ರವರೆಗೆ ಕದ್ರಿ ಉದ್ಯಾನವನದಲ್ಲಿ ಮಾವು ಮೇಳ

ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ಮೇ 28 ರಿಂದ 31ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ಮಾವು ಮೇಳ ಆಯೋಜಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಈ ಮೇಳದಲ್ಲಿ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕವಾಗಿ ಮಾಗಿಸಲಾದ ಮಾವು ಬೆಳೆಯ ವಿವಿಧ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನ್ಪಲ್ಲಿ, ಶುಗರ್ ಬೇಬಿ ಇತ್ಯಾದಿ ಮಾವಿನ ಹಣ್ಣುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ವಿವರಿಸಿದರು. 

ರೈತ ವಾಸು ಮಾತನಾಡಿ, ರಾಮನಗರದಿಂದ ಸುಮಾರು 25 ಮಾವು ಬೆಳೆಗಾರರು ಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬೆಳಗ್ಗೆ ೮ರಿಂದ ರಾತ್ರಿ 8.30ರ ವರೆಗೆ ಮಾರಾಟ ಇರಲಿದೆ. ಈ ವರ್ಷ ಸುಮಾರು 25 ಟನ್ ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಂದರು. 

ಮೇ 28ರಂದು ಪೂರ್ವಾಹ್ನ 11ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಅತಿಥಿಗಳಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ತೋಟಗಾರಿಕಾ ಇಲಾಖೆಯ ನಿರ್ದೇಶಕ ಇಬ್ರಾಹೀಂ ಮೈಗೂರ, ಜಿಪಂ ಸಿಇಒ ನರ್ವಡೆ ವಿನಾಯಕ ಕರ್ಬಾರಿ, ಮನಪಾ ಆಯುಕ್ತ ರವಿಚಂದ್ರ ನಾಯ್ಕ್, ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಡಾ.ಎಸ್.ನಂದಾ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ್ ಕುಮಾರ್ ರೈ ಭಾಗವಹಿಸಲಿದ್ದಾರೆ ಎಂದರು. 

ಅನುದಾನ ರದ್ದು..

ತೋಟಗಾರಿಕೆಯ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಮಾತನಾಡಿ, ಅನುದಾನದ ಕೊರತೆಯಿಂದಾಗಿ ಈ ವರ್ಷ ತೋಟಗಾರಿಕಾ ಇಲಾಖೆ ವತಿಯಿಂದ ಮಾವು ಮೇಳ ಆಯೋಜಿಸುತ್ತಿಲ್ಲ. ಬದಲಾಗಿ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಪ್ರಚಾರ ಸಾಹಿತ್ಯ ಯೋಜನೆಯಡಿ ಮಾವು ಮೇಳ ಆಯೋಜನೆಗೆ ಕಳೆದ ವರ್ಷ 75,000 ರೂ. ಅನುದಾನ ನೀಡಲಾಗಿತ್ತು. ಆದರೆ ಈ ವರ್ಷ ಈ ಯೋಜನೆ ರಾಜ್ಯವ್ಯಾಪಿಯಾಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದರು.

ಸಂಘದ ನಿರ್ದೇಶಕ ಸಿದ್ದರಾಜು, ಪ್ರಗತಿಪರ ಕೃಷಿಕ ವಾಸು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article