ಯಶಸ್ಸಿಗೆ ವೃತ್ತಿ ಕೌಶಲ್ಯ ಆಳವಡಿಕೆ ಅವಶ್ಯ: ಪ್ರೊ. ಎಂ. ಶಾಂತಾರಾಮ ಶೆಟ್ಟಿ
ಮೇರಿಹಿಲ್ನ ಪಾಲೆಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ) ಮಂಗಳೂರು ಶಾಖೆ ವತಿಯಿಂದ ಲೆಕ್ಕ ಪರಿಶೋಧಕ ಸಂಘದ ಸದಸ್ಯರಿಗಾಗಿ ನಡೆದ ‘ಅಧಿಗಮ ಜ್ಞಾನ ಬಲವರ್ಧನೆ’ ಶೀರ್ಷಿಕೆಯಡಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಸವಾಲುಗಳು ಎದುರಾಗುವುದು ಸಹಜ. ಅದನ್ನು ಪರಿಹರಿಸಿಕೊಳ್ಳುವ ಚಾಕಚಕ್ಯತೆ ಅವಶ್ಯ. ಹೆಚ್ಚಿನ ಜ್ಞಾನ ಸಂಗ್ರಹದ ಜತೆಗೆ ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳುವುದು ಅಗತ್ಯ. ನಮಗೆ ನಾವೇ ಪ್ರೇರಣೆಯಾಗುವಂತಹ ಕೆಲಸ ಮಾಡಬೇಕು. ಇಂತಹ ಸಮ್ಮೇಳನಗಳು ಲೆಕ್ಕ ಪರಿಶೋಧಕರಿಗೆ ಹೊಸ ವಿಷಯಗಳ ಅಧ್ಯಯನಕ್ಕೆ ಪೂರಕವಾಗಿದೆ ಎಂದರು.
ವೃತ್ತಿ ಜೀವನದಲ್ಲಿ ಶ್ರದ್ಧೆ ಮತ್ತು ನಂಬಿಕೆ ಮುಖ್ಯ. ಎಐ ಬಂದ ಬಳಿಕ ಕೆಲಸ ಹಲವು ಮಂದಿ ಕೆಲಸ ಕಳೆದುಕೊಂಡಿರಬಹುದು. ಆದರೆ ಅದರ ದುಪ್ಪಟ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಮನಗಾಣಬೇಕು. ಧನಾತ್ಮಕ ಯೋಚನೆ ನಮ್ಮದಾಗಬೇಕು ಎಂದವರು ಹೇಳಿದರು.
ಐಸಿಎಐ ಕೇಂದ್ರ ಮಂಡಳಿ ಸದಸ್ಯ ದಯಾ ನಿವಾಸ ಶರ್ಮ, ಪ್ರಮೋದ್ ಜೈನ್, ಪಂಕಜ್ ಶರ್ಮಾ, ಪ್ರಮೋದ್ ಹೆಗ್ಡೆ, ಸಂಸದ ಕ್ಯಾ.ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.
ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಸಿಎ ಡೇನಿಯಲ್ ಮಾರ್ಷ್ ಪಿರೇರಾ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್. ವಂದಿಸಿದರು. ಸಿಎ ವಿಕ್ರಮ್ ಕಾರ್ಯಕ್ರಮ ನಿರೂಪಿಸಿದರು.
ದೇಶದ ವಿವಿಧ ಭಾಗಗಳಿಂದ ಲೆಕ್ಕಪರಿಶೋಧಕರು ಪಾಲ್ಗೊಂಡಿದ್ದರು. ವೃತ್ತಿಯಲ್ಲಿ ಉದಯೋನ್ಮುಖ ಬೆಳವಣಿಗೆಗಳು, ತಂತ್ರಜ್ಞಾನ ಅಧಾರಿತ ರೂಪಾಂತರ ಹಾಗೂ ಇತ್ತೀಚಿನ ಹಣಕಾಸು ನಿಯಂತ್ರಣ ಬದಲಾವಣೆಗಳ ಬಗ್ಗೆ ವೃತ್ತಿಪರರನ್ನು ಸಜ್ಜುಗೊಳಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸಮ್ಮೇಳನದಲ್ಲಿ ಏಳು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, ಸೈಬರ್ ಭದ್ರತೆ, ಉತ್ತರಾಧಿಕಾರ ಯೋಜನೆ, ಡಿಜಿಟಲ್ ಯುಗದಲ್ಲಿನ ವೃತ್ತಿಪರ ಅವಕಾಶಗಳು ಹಾಗೂ 2025ರ ಆದಾಯ ತೆರಿಗೆ ಕಾಯ್ದೆಯಡಿ ಮರು ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ವಿಷಯ ತಜ್ಞರು ಉಪನ್ಯಾಸ ನೀಡಿದರು.