ಆರೋಗ್ಯ ಸೇವೆಯ ಬೆನ್ನೆಲುಬಾದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ನೀಡಿ: ಬಿಎಂಎಸ್ ಆಗ್ರಹ
ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ರವಾನಿಸಿ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು.
ಮನವಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ‘ಸಮಸ್ತ’ ಡಿಜಿಟಲ್ ಆರೋಗ್ಯ ಮಾಹಿತಿ ವ್ಯವಸ್ಥೆ ಮೂಲಕ ಆಶಾ ಕಾರ್ಯಕರ್ತೆಯರ ಮೇಲೆ ಅತಿಯಾದ ಡಿಜಿಟಲ್ ಕೆಲಸದ ಹೊರೆ ಹೇರಲಾಗುತ್ತಿದ್ದು, ಮನೆಮನೆ ಭೇಟಿ, ಗರ್ಭಿಣಿಯರ ಆರೈಕೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಗಳ ಜೊತೆಗೆ ಗಂಟೆಗಟ್ಟಲೆ ಡೇಟಾ ದಾಖಲಿಸುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ಆರೋಗ್ಯ ಸೇವೆಯ ಗುಣಮಟ್ಟಕ್ಕೂ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ಅವರು, ಆಶಾ ಕಾರ್ಯಕರ್ತೆಯರು ಕೊರೊನಾ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದರೂ, ಇಂದು ಅವರಿಗೆ ತಕ್ಕ ಗೌರವ, ಭದ್ರತೆ ಹಾಗೂ ನ್ಯಾಯ ದೊರೆಯುತ್ತಿಲ್ಲ ಎಂದು ಹೇಳಿದರು.
‘ಸಮಸ್ತ’ ಆಪ್ನ ಹೆಚ್ಚುವರಿ ಒತ್ತಡವನ್ನು ಹಿಂಪಡೆಯಬೇಕು, ಪ್ರೋತ್ಸಾಹ ಧನವನ್ನು ನಿಗದಿತ ದಿನಾಂಕಕ್ಕೆ ಪಾವತಿಸಬೇಕು ಹಾಗೂ ನಾಲ್ಕು ವರ್ಷಗಳಿಂದ ಹೆಚ್ಚಳವಾಗದಿರುವ ಧನವನ್ನು ತಕ್ಷಣ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಮನವಿಯಲ್ಲಿ ‘ಸಮಸ್ತ’ ಆಪ್ನ ಹೆಚ್ಚುವರಿ ಕೆಲಸದ ಒತ್ತಡ ರದ್ದುಪಡಿಸುವುದು, ಪ್ರೋತ್ಸಾಹ ಧನವನ್ನು ಸಮಯಕ್ಕೆ ಬಿಡುಗಡೆಗೊಳಿಸುವುದು, ಪ್ರೋತ್ಸಾಹ ಧನ ಹೆಚ್ಚಳ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಮಟ್ಟದ ಸಮಿತಿ ರಚಿಸುವಂತೆ ಒತ್ತಾಯಿಸಲಾಗಿದೆ.
ಭಾರತೀಯ ಮಜ್ದೂರು ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ರೇವತಿ, ಬಂಟ್ವಾಳ ತಾಲೂಕು ಅಧ್ಯಕ್ಷೆ ತುಳಸಿ ದೇವರಾಜ್, ಕಾರ್ಯದರ್ಶಿ ಡೀಲಾಕ್ಷೀ, ಕೋಶಾಧಿಕಾರಿ ಸೌಮ್ಯ, ಗೌರವಾಧ್ಯಕ್ಷೆ ಗಿರಿಜಾ ನಾವೂರು, ಪ್ರಮುಖರಾದ ಪ್ರಮೀಳಾ, ಹರಿಣಾಕ್ಷೀ, ಪ್ರಮೀಳಾ ಮಾಣಿ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.