ಬೀದಿಬದಿ ವ್ಯಾಪಾರಸ್ಥರನ್ನು ಹಾಗೂ ಸಂಘವನ್ನು ಅವಮಾನಿಸಿ, ಸುಳ್ಳು ಆರೋಪ ಹೊರಿಸಿ ಬಡ ಬೀದಿ ವ್ಯಾಪಾರಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
ಈ ಕುರಿತು ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU)ದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾಹಿತಿ ನೀಡಿದರು.
ನಗರದ ಟೌನ್ ಹಾಲ್ ಬಳಿ ಭಾನುವಾರ ದಿನ ಹಳೆ ಬಟ್ಟೆ ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ಮೈಸೂರಿನಿಂದ ಬಂದು ವ್ಯಾಪಾರ ಮಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕವಾಗಿ ನಿಂದಿಸುತ್ತಾರೆ ಮತ್ತು ಅವರು ಅಕ್ರಮ ವ್ಯಾಪಾರಿಗಳು ಅವರಿಗೆ ವ್ಯಾಪಾರ ಮಾಡಲು ಅನುಮತಿ ಇಲ್ಲ ಕಾನೂನು ಬಾಹಿರವಾಗಿ ವ್ಯಾಪಾರ ಮಾಡುತ್ತಾರೆ ಎಂದು ನೇರವಾಗಿ ವ್ಯಾಪಾರಿಗಳೊಂದಿಗೆ ಸಂಘರ್ಷಕ್ಕೆ ಇಳಿದು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲು ಮಾಡುತ್ತಾರೆ. ವಾಸ್ತವದಲ್ಲಿ ಈ ಹಳೆ ಬಟ್ಟೆ ಮಾರುವ ಬೀದಿ ವ್ಯಾಪಾರಿಗಳು ದೇಶದ ಹಾಗೂ ರಾಜ್ಯದ ಎಲ್ಲಾ ನಗರಗಳಲ್ಲಿ ವ್ಯಾಪಾರ ಮಾಡುತ್ತಿದ್ದಂತೆ ಇಲ್ಲಿಯೂ ಕಳೆದ 30-40 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ . ಇವರು ಸಾಮಾಜಿಕ ಜಾಲತಾಣಗಳಲ್ಲಿ ಇವರಲ್ಲಿ ಐಡಿ ಕಾರ್ಡ್ ಇಲ್ಲ ಎಂದು ಹೇಳುತ್ತಿದ್ದಾರೆ. "ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014" ಕಾನೂನಿಗೆ ಪೂರಕವಾಗಿ ಜಾರಿಯಲ್ಲಿರುವ ಕರ್ನಾಟಕ ಬೀದಿ ವ್ಯಾಪಾರದ ಅಧಿನಿಯಮ 2019 ರ ಪ್ರಕಾರ ಬೀದಿಬದಿ ವ್ಯಾಪಾರಿಗಳು ವ್ಯಾಪಾರದ ಪ್ರಮಾಣ ಪತ್ರ ಮತ್ತು ವ್ಯಾಪಾರಿಗಳು ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಬದಲಾಗಿ ನಗರಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯು ಸಮೀಕ್ಷೆ ನಡೆಸಿ ಅವರಿಗೆ ಪ್ರಮಾಣ ಪತ್ರ, ಐಡಿ ಕಾರ್ಡ್ ವಿತರಣೆ ಮಾಡಬೇಕಿತ್ತು ಬೀದಿ ವ್ಯಾಪಾರದ ಕಾನೂನನ್ನು ಜಾರಿ ಮಾಡದ ನಗರಪಾಲಿಕೆಯ ತಪ್ಪನ್ನು ಬಡ ಬೀದಿ ವ್ಯಾಪಾರಿಗಳ ಮೇಲೆ ಹೊರಿಸಿ ಅವರನ್ನು ಅಪರಾಧಿಗಳಂತೆ ಬಿಂಬಿಸುವುದು ಎಷ್ಟು ಸರಿ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘ ಪ್ರಶ್ನಿಸಿದೆ.
ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು 2011 ರಿಂದ ದ.ಕ ಜಿಲ್ಲೆಯಲ್ಲಿ ಬೀದಿಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದೆ ಅದರಂತೆ ನಮ್ಮ ಸಂಘವನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರಂತೆ ನಮ್ಮ ಸಂಘವನ್ನು ಕಾರ್ಯಯೋಜನೆ ಮತ್ತು ಬೈಲಾ ರಚನೆ ಮಾಡಿಕೊಂಡು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ನೋಂದಾವಣೆ ಮಾಡಿಕೊಂಡು ನಾವು ಅಂಗೀಕರಿಸಿರುವ ಬೈಲಾದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ನಮ್ಮ ಬೈಲಾ ಪ್ರಕಾರ ನಾವು ಸದಸ್ಯರಿಂದ ಸಂಘಟನಾ ಚಟುವಟಿಗೆಗಾಗಿ ಪ್ರತಿ ಸದಸ್ಯರಿಂದ ವಾರದ ದೇಣಿಗೆಯಾಗಿ ತಲಾ ₹20/- ರಂತೆ ಸಂಗ್ರಹಿಸಿ ಅದರಿಂದ ಬರುವ ಆದಾಯವನ್ನು ಬೀದಿ ವ್ಯಾಪಾರಿಗಳಿಗೆ ಶೈಕ್ಷಣಿಕ ನೆರವು, ಮರಣ ಪರಿಹಾರ, ವೈದ್ಯಕೀಯ ನೆರವು ನೀಡಲು ಬಳಸುತ್ತೇವೆ.
ನಮ್ಮ ಕಚೇರಿ ಸಿಬ್ಬಂದಿ ಮೂಲಕ ನಮ್ಮ ಸದಸ್ಯರ ಬಳಿಗೆ ಹೋಗಿ ಈ ದೇಣಿಗೆಯನ್ನು ಸಂಗ್ರಹಣೆ ಮಾಡುತ್ತೇವೆ ಇದನ್ನು ಕೆಲವು ವ್ಯಕ್ತಿಗಳು ನಾವು ಹಫ್ತಾ ಸಂಗ್ರಹಿಸುತ್ತೇವೆ ಎಂದು ಬಿಂಬಿಸಿ ಮಹಿಳಾ ಸಿಬ್ಬಂದಿ ದೇಣಿಗೆ ಸಂಗ್ರಹಣೆ ಮಾಡುವ ವೇಳೆ ವಿಡಿಯೋ ಚಿತ್ರೀಕರಣ ಮಾಡಿ ಮಹಿಳಾ ಸಿಬ್ಬಂದಿಯನ್ನು ತಡೆದು ಅನಗತ್ಯವಾಗಿ ಪ್ರಶ್ನೆ ಮಾಡಿ ಮಹಿಳೆಗೆ ಅವಮಾನ ಮಾಡುವ ರೀತಿಯಲ್ಲಿ ಯೂ ಟ್ಯೂಬ್ ಚಾನೆಲಿನಲ್ಲಿ ಪ್ರಸಾರ ಮಾಡಿರುತ್ತಾರೆ ನಮ್ಮ ಸದಸ್ಯರು ನಮ್ಮ ಸಂಘದ ನಾಯಕರ ಹೆಸರನ್ನು ಅನಗತ್ಯವಾಗಿ ಚಾನೆಲಿನಲ್ಲಿ ಹೇಳಿ ನಮ್ಮ ಸದಸ್ಯರು ಹೇಳಿರುವ ಸಕಾರಾತ್ಮಕ ಅಂಶಗಳನ್ನು ಎಡಿಟ್ ಮಾಡಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಯೂ ಟ್ಯೂಬ್ ಚಾನೆಲಿನಲ್ಲಿ ಪ್ರಸಾರ ಮಾಡಿರುತ್ತಾರೆ.
ನಗರದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಬಳಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಗೂಡಂಗಡಿ, ಹಾಲಿನ ಬೂತ್, ಅಂಗವಿಕಲರ ಕೋಟಾದ ಗೂಡಂಗಡಿ ದಾರರನ್ನು, ಪಾಲಿಕೆ, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವರದಿಯನ್ನು ಪ್ರಸಾರ ಮಾಡುತ್ತಿದ್ದಾರೆ
ಇದು ನಗರದ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಮತ್ತು ಕಾನೂನನ್ನು ಕೈಗೆತ್ತಿ ಕೊಳ್ಳಲು ಸಾರ್ವಜನಿಕರನ್ನು ಪ್ರಚೋದಿಸುವ ರೀತಿಯಲ್ಲಿ ಇವರು ವರ್ತಿಸುತ್ತಿರುವುದರಿಂದ ಇವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಒತ್ತಾಯಿಸುತ್ತೇವೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷ ಮುಜಾಫರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್., ಉಪಾಧ್ಯಕ್ಷ ಎಂ.ಎನ್. ಶಿವಪ್ಪ, ಕೋಶಾಧಿಕಾರಿ ಹಂಝ ಮೊಹಮ್ಮದ್, ಉಪಾಧ್ಯಕ್ಷ ವಿಜಯ್ ಜೈನ್, ಅಬ್ದುಲ್ ಖಾದರ್, ಗುಡ್ಡಪ್ಪ ಉಪಸ್ಥಿತರಿದ್ದರು.