ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಕಾರ್ಮಿಕರ ದಿನಾಚರಣೆ, ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
Friday, May 1, 2026
ಮಂಗಳೂರು: ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಇಂದು ನಡೆಸಲಾಯಿತು.
ನಗರದ ಮೈದಾನ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡರಾದ ಅಬ್ದುಲ್ ಖಾದರ್ ವಾಮಂಜೂರು ಧ್ವಜಾರೋಹಣ ನಡೆಸಿದರು.
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ 140 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸ, ನಿದ್ದೆ, ವಿಶ್ರಾಂತಿಗಾಗಿ ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಲ್ಲಿ ನಡೆದ ಕಾರ್ಮಿಕರ ಸಮರಧೀರ ಹೋರಾಟ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ದಾರಿದೀಪ ಆಗಿದೆ.
ಕಾರ್ಮಿಕರು ಜಗತ್ತಿನಲ್ಲಿ ಏನಾದರೂ ಗಳಿಸಿಕೊಂಡಿದ್ದರೆ ಅದು ಹೋರಾಟದಿಂದ ಮಾತ್ರ ಎಂದು ಅವರು ಹೇಳಿದರು.
ಇದೇ ಸಂಧರ್ಭದಲ್ಲಿ 2026ನೇ ಸಾಲಿನ SSLC ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಅಧ್ಯಕ್ಷರಾದ ಮುಜಾಫರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಮುಖರಾದ ಸಂತೋಷ್ ಆರ್ ಎಸ್, ವಿಜಯ್ ಜೈನ್, ಅಬ್ದುಲ್ ಖಾದರ್, ರಫೀಕ್ ಪಾಂಡೇಶ್ವರ, ರಿಯಾಜ್ ಎಂ ಕೆ, ಮೊಯಿದಿನ್ ಬೈಕಂಪಡಿ, ವಿಶ್ವನಾಥ್ ಕದ್ರಿ, ನಾಗೇಶ್, ಸಲೀಮ್, ಕಲಂದರ್ ಬೀರಿ ಮತ್ತಿತರರು ಉಪಸ್ಥಿತರಿದ್ದರು.




