ಜನಪದ ಕಲಾ ಕಾರ್ಯಾಗಾರ
ರಿತದೀಪ್ ನಿರ್ದೇಶನದ ಈ ನಾಟಕವು ಬಂಗಾಳದ ಜನಪದ ಕಥನ ಪರಂಪರೆಯ ಸೊಗಸನ್ನು ಪ್ರಸ್ತುತಪಡಿಸಿತು. ಅಜ್ಗುಬಿ ಪಥಾಶಾಲಾ ತಂಡದ ಸದಸ್ಯರಾದ ಅನು ಮಂಡಲ್, ಸೋನಾಲಿ ಪೈಕ್, ರಿಮಾ ಖಾನ್, ಸುಮಿ ರಾಯ್, ಸಂತಾನು ಮಂಡಲ್, ಸುರೋಜಿತ್ ಮಂಡಲ್ ಮತ್ತು ಸುದೀಪ್ತ ನಸ್ಕರ್ ಟ್ರಸ್ಟಿಗಳಾದ ಸುರ್ಮಾ ಸರ್ಕಾರ್ ಮತ್ತು ದೇಬಶಿಶ್ ಸರ್ಕಾರ್ ಅವರ ಸಹಭಾಗಿತ್ವದೊಂದಿಗೆ ಈ ಪ್ರದರ್ಶನವನ್ನು ನೀಡಿದರು. ಆರ್ಟ್ ಕೆನರಾ ಟ್ರಸ್ಟ್ನ ಅಧ್ಯಕ್ಷ ಸುಭಾಸ್ ಚಂದ್ರ ಬಸು ಅವರ ಆಹ್ವಾನದ ಮೇರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಂಗಾಳದ ಸಾಂಪ್ರದಾಯಿಕ ಕಲಾ ಪ್ರಕಾರಗಳ ಪ್ರದರ್ಶನಗಳು ಸಹ ನಡೆದವು. ಅಕ್ಕಿಹಿಟ್ಟಿನ ಬಳಕೆಯಿಂದ ನೆಲದ ಮೇಲೆ ಬಿಡಿಸುವ ‘ಅಲ್ಪೋನಾ’ ಕಲೆಯನ್ನು ಕಲಾವಿದ ಕಾಂಚನ್ ಮಾರ್ಗದರ್ಶನ ನೀಡಿದರು. ಇದೇ ವೇಳೆ ‘ಕಾಂತ ಸ್ಟಿಚ್’ ಹಸ್ತಕಲೆಯ ಪ್ರದರ್ಶನವೂ ನಡೆಯಿತು.
ಕಾರ್ಯಾಗಾರಗಳ ಭಾಗವಾಗಿ, ಕಲಾವಿದೆ ರೇಶ್ಮಾ ಎಸ್. ಶೆಟ್ಟಿ ಅವರು ನೈಸರ್ಗಿಕ ಬಣ್ಣಗಳ ತಯಾರಿ ಕುರಿತು ತರಬೇತಿ ನೀಡಿದರು. ಎಲೆಗಳು, ಹೂವುಗಳು ಹಾಗೂ ಮಣ್ಣಿನಂತಹ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ಪರಿಸರ ಸ್ನೇಹಿ ಬಣ್ಣಗಳನ್ನು ತಯಾರಿಸುವ ವಿಧಾನವನ್ನು ಅವರು ಪರಿಚಯಿಸಿದರು. ಮಕ್ಕಳಿಗೆ ಸ್ವಯಂ ಪಾಲ್ಗೊಳ್ಳುವ ಅನುಭವದೊಂದಿಗೆ ಟೈ-ಡೈ ವಿಧಾನವನ್ನು ಬಳಸಿಕೊಂಡು ವಿವಿಧ ವಿನ್ಯಾಸಗಳನ್ನು ಸೃಷ್ಟಿಸುವ ಅವಕಾಶ ನೀಡಲಾಯಿತು.
ಸಾಂಪ್ರದಾಯಿಕ ಕಾವಿ ಕಲೆಯ ಕುರಿತಾದ ಎರಡನೇ ದಿನದ ಕಾರ್ಯಾಗಾರವನ್ನು ಕಲಾವಿದ ಡಾ. ಜನಾರ್ದನ ಹಾವಂಜೆ ಏಪ್ರಿಲ್ 29 ರಂದು ನಡೆಸಿದರು. ಈ ಪ್ರಾದೇಶಿಕ ಭಿತ್ತಿಚಿತ್ರ ಕಲೆಯ ವೈಶಿಷಗಳನ್ನು ಪರಿಚಯಿಸಿದರು.
ವಿಭಿನ್ನ ಪ್ರದೇಶಗಳ ಪರಂಪರೆಯ ಕಲಾರೂಪಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿ, ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ಸಂಸ್ಕೃತಿಯ ಅರಿವು ಬೆಳೆಸುವ ವೇದಿಕೆಯಾಗಿ ಈ ಕಾರ್ಯಕ್ರಮ ಕಾರ್ಯನಿರ್ವಹಿಸಿತು.