ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ-ನ್ಯಾಯಾಧೀಶರಿಂದ ಶೀಘ್ರ ಸ್ಥಳ ಪರಿಶೀಲನೆ: ಐವನ್ ಡಿಸೋಜ
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಕಚೇರಿಯಲ್ಲಿ ಶನಿವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸ್ಟೇಟ್ ಬ್ಯಾಂಕ್ನಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಮುಖ್ಯ ನ್ಯಾಯಾಧೀಶರು ಪರಿಶೀಲಿಸಲಿದ್ದಾರೆ ಎಂದರು.
ಹೈಕೋರ್ಟ್ ಪೀಠಕ್ಕೆ ಅಗತ್ಯವಾಗಿ ಕೋರ್ಟ್ ಹಾಲ್, ದಾಖಲೆ ಪತ್ರ ಸಂಗ್ರಹಿಸಲು ಜಾಗದ ಅಗತ್ಯವಿದೆ. ಅದಕ್ಕಾಗಿ ಸದ್ಯ 5.5 ಎಕರೆ ಜಾಗದಲ್ಲಿರುವ ಹಳೆ ಜಿಲ್ಲಾಧಿಕಾರಿ ಕಚೇರಿಯ ನಾಲ್ಕು ಅಂತಸ್ತಿನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮೀಸಲಿಡುವಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇದಲ್ಲದೆ ಈಗಾಗಲೇ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿಚಾರಣಾಧೀನ ಕೈದಿಗಳ ಜೈಲು ಮುಡಿಪುವಿಗೆ ಸ್ಥಳಾಂತರಗೊಂಡ ಬಳಿಕ ಆ ಜಾಗವೂ ಲಭ್ಯವಾಗಲಿದೆ. ಆದರೆ ಆ ಕಾರ್ಯಕ್ಕೆ ಇನ್ನೂ ಎರಡು ಮೂರು ವರ್ಷಗಳು ಬೇಕಾಗಬಹುದಾದ ಕಾರಣ ಸದ್ಯ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಪೀಠವನ್ನು ಸ್ಥಾಪಿಸಬಹುದಾಗಿದೆ. ಸ್ಥಳ ಪರಿಶೀಲನೆ ನಡೆಸಲಿರುವ ಹೈಕೋರ್ಟ್ ನ ಮುಖ್ಯ ನ್ಯಾಯಧೀಶರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಒಟ್ಟಿನಲ್ಲಿ ಈ ಪ್ರಕ್ರಿಯೆ ಹೈಕೋರ್ಟ್ ಪೀಠಕ್ಕಾಗಿ ಜನಸಾಮಾನ್ಯರು ಸೇರಿದಂತೆ ವಕೀಲರ ಸಂಘ, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ತಂಡದ ಹೋರಾಟದ ಫಲವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯದ ಕುರಿತಂತೆ ಪೋಸ್ಟ್ಕಾರ್ಡ್, ಈಮೇಲ್ ಚಳವಳಿಯ ಮೂಲಕ ಹೈಕೋರ್ಟ್ ನ್ಯಾಯಾಧೀಶರ ಗಮನ ಸೆಳೆಯಲಾಗಿತ್ತು. ಅವರಿಗೆ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಅಗತ್ಯತತೆಯ ಮನವರಿಕೆ ಆಗಿದೆ. ಈ ಮೂಲಕ ಮಂಗಳೂರಿನಲ್ಲೂ ಹುಬ್ಬಳ್ಳಿ- ಧಾರವಾಡ, ಕಲಬುರಗಿ ರೀತಿಯಲ್ಲಿ ಸಂಚಾರಿ ಪೀಠ ಸ್ಥಾಪನೆ ಆಗುವ ಭರವಸೆ ವ್ಯಕ್ತವಾಗಿದೆ ಎಂದು ಹೇಳಿದರು.
ದ.ಕ. ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಘವೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ್, ಸರಕಾರಿ ವಕೀಲ ಎಂ.ಪಿ. ನೊರೊನ್ಹ, ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.