ಬಿಎಸ್‌ವೈ ಅಭಿಮಾನೋತ್ಸವ: ಸ್ಟಿಕ್ಕರ್ ಅಭಿಯಾನ

ಬಿಎಸ್‌ವೈ ಅಭಿಮಾನೋತ್ಸವ: ಸ್ಟಿಕ್ಕರ್ ಅಭಿಯಾನ

ಮಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50ನೇ ಅಭಿಮಾನೋತ್ಸವ ಆಚರಣೆ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿ ಎದುರು ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಕ್ಯಾ.ಬ್ರಿಜೇಶ್ ಚೌಟ, ರಾಜ್ಯ ರಾಜಕೀಯದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ ಯಡಿಯೂರಪ್ಪ ಅವರು ಇತರರಿಗೆ ಪ್ರೇರಣೆಯಾಗಿದ್ದಾರೆ. 2028ರ ಅಸೆಂಬ್ಲಿ ಚುನಾವಣೆಗೆ ದಿಕ್ಸೂಚಿಯಾಗಿ ಬಿಎಸ್ವೈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಕಾರ್ಯಕರ್ತರಿಗೆ ಹೊಸ ಸ್ಫೂರ್ತಿ, ಪ್ರೇರಣೆಯಾಗಬೇಕು ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಬಿಎಸ್ವೈ ರಾಜ್ಯದ ಯಶಸ್ವಿ ರಾಜಕಾರಣಿಯಾಗಿದ್ದು, ಕೃಷಿಗೆ ಪ್ರತ್ಯೇಕ ಬಜೆಟ್ ನೀಡಿದ್ದಾರೆ. ದ.ಕ. ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಿಗೆ ಮಾತ್ರವಲ್ಲ ಮಂಗಳೂರು ಪಾಲಿಕೆಗೂ ಅತ್ಯಧಿಕ ಅನುದಾನ ನೀಡಿದ್ದು, ಇವರ ಸಾಧನೆ 2028ರ ಅಸೆಂಬ್ಲಿ ಚುನಾವಣೆಗೆ ಕಾರ್ಯಕರ್ತರಿಗೆ ಪ್ರೇರಣೆಯಾಗಲಿದೆ. ದ.ಕ. ಜಿಲ್ಲೆಯಿಂದ ಐದು ಸಾವಿರ ಮಂದಿ ಕಾರ್ಯಕರ್ತರು ಬಿಎಸ್ವೈ ಸಮಾವೇಶಕ್ಕೆ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಬಿಎಸ್ವೈ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯದ ರೂವಾರಿ ಆಗಿದ್ದಾರೆ ಎಂದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಮೇ 9ರ ಸಮಾವೇಶ ಮಾದರಿಯಾಗಲಿದ್ದು, ವಿಪಕ್ಷಗಳಿಗೆ ಒಂದು ಸಂದೇಶ ನೀಡಲಿದೆ. ಅಲ್ಲದೆ ಕಾರ್ಯಕರ್ತರಿಗೂ ಬಿಎಸ್ವೈ ಆಡಳಿತ ವೈಖರಿಯನ್ನು ಸ್ಮರಿಸುವ ಕೆಲಸವಾಗಲಿದೆ ಎಂದರು.

ಈ ವೇಳೆ ಬಿಜೆಪಿ ಪ್ರಮುಖರಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ಸಂಜಯ ಪ್ರಭು, ಗುರುಪ್ರಸಾದ್, ಪೂರ್ಣಿಮಾ, ಕವಿತಾ ಸನಿಲ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article