ಪ್ರಜ್ವಲ್ ಯುವಕ ಮಂಡಲ, ಸಮಾಜಮುಖಿ ಸೇವೆಯಲ್ಲಿ ಮಾದರಿ ಸಂಘಟನೆ: ಶಾಸಕ ವೇದವ್ಯಾಸ ಕಾಮತ್
ಅವರು ಸೂಟರ್ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಬ್ಬುಸ್ವಾಮಿ ರಂಗಮಂದಿರದಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ 28ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಯುವಕ ಮಂಡಲವು ಕೇವಲ ವಾರ್ಷಿಕೋತ್ಸವ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪರಿಸರದಲ್ಲಿ ನಡೆಯುವ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವಾ ಅಗತ್ಯಗಳಿಗೆ ಸ್ಪಂದಿಸುತ್ತಾ ನಿರಂತರವಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆಯು ವಾರ್ಷಿಕೋತ್ಸವದ ಜೊತೆಗೆ ನಿರಂತರ 28 ವರ್ಷ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಿ ತನ್ನ ಸೇವಾ ಚಟುವಟಿಕೆಗಳ ಮೂಲಕ ಜನಮನ ಗೆದ್ದಿದೆ. ಮಾನವೀಯತೆ ಮತ್ತು ನೈತಿಕ ಮೌಲ್ಯಗಳ ಇಂತಹ ಸಂಘಟನೆಗಳು ಯುವಜನತೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜ್ವಲ್ ಯುವಕ ಮಂಡಲದ ಗೌರವಾಧ್ಯಕ್ಷ, ನಿವೃತ್ತ ತಹಶೀಲ್ದಾರ್ ಬಾಬು ಪಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಭಿಮತ ವಾಹಿನಿಯ ನಿರ್ದೇಶಕಿ ಮಮತಾ ಶೆಟ್ಟಿ, ನಿಕಟಪೂರ್ವ ಕಾರ್ಪೊರೇಟರ್ ಭರತ್ ಕುಮಾರ್, ಆರ್ಡಿಪಿಆರ್ ಇಲಾಖೆಯ ವಿಶ್ವನಾಥ್ ಉಳ್ಳಾಲ್, ಯುವಕ ಮಂಡಲದ ಗೌರವ ಸಲಹೆಗಾರರಾದ ಕೆ.ಕೆ. ಪೇಜಾವರ, ಎಸ್. ಜಗದೀಶ್ಚಂದ್ರ ಅಂಚನ್, ಅಧ್ಯಕ್ಷ ಅಭಿಲಾಷ್ ಉಪಸ್ಥಿತರಿದ್ದರು.
ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಈಚೆಗೆ ಡಾಕ್ಟರೇಟ್ ಪದವಿ ಪಡೆದ ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಯತೀನ್ ಕುಮಾರ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಧನ್ಯಾ ಯು.ಎಸ್. ಹಾಗೂ ಪ್ರೇರಣಾ ಎನ್.ಪಿ. ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಆಶ್ಲೇಷ್ ಡಿ. ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.
ಶ್ರದ್ದಾಂಜಲಿ:
ಇತ್ತೀಚೆಗೆ ನಿಧನ ಹೊಂದಿದ್ದ ಪ್ರಜ್ವಲ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಶ್ರದ್ದಾಂಜಲಿ ಅರ್ಪಿಸಿ, ಗೌರವ ಸಲಹೆಗಾರ ಎಸ್. ಜಗದೀಶ್ಚಂದ್ರ ಅಂಚನ್ ನುಡಿನಮನ ಸಲ್ಲಿಸಿದರು.
ಕೆ.ಕೆ. ಪೇಜಾವರ ಸ್ವಾಗತಿಸಿದರು. ಸೃಜನ್ ಮಾನವ್ ವಂದಿಸಿದರು. ನಂತರ ಬೆನಕ ಆರ್ಟ್ಸ್ ಕುಡ್ಲ ತಂಡದಿಂದ ‘ಪೊರಿಪುದಪ್ಪೆ ಜಲದುರ್ಗೆ’ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು.