ಹಾಲಿಗೆ 15 ರೂ. ಪ್ರೋತ್ಸಾಹ ಧನ-ಕುಮ್ಕಿ ಭೂಮಿಗೆ ಹಕ್ಕು ಪತ್ರಕ್ಕೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದಿಂದ ಜಾಥಾ
Friday, May 29, 2026
ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆಯಿಂದ ಹೈನುಗಾರಿಕೆ ಕಷ್ಟವಾಗಿದ್ದು ಹಾಲಿನ ದರವನ್ನು ಲೀಟರ್ ಗೆ 100 ರೂ.ಗೆ ಹೆಚ್ಚಿಸಬೇಕು ಸರ್ಕಾರ 15 ರೂ ಪ್ರೋತ್ಸಾಧನವನ್ನು ನೀಡಬೇಕು. ಕುಮ್ಕಿ ಭೂಮಿ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಶುಕ್ರವಾರ ಮೂಡುಬಿದಿರೆಯಲ್ಲಿ ಪ್ರತಿಭಟನಾ ಜಾಥಾ ನಡೆಯಿತು.
ತಾಲೂಕು ಆಡಳಿತ ಸೌಧದ ಮುಂಭಾಗ ನ್ಯಾಯವಾದಿ, ರೈತ ಹೋರಾಟಗಾರ ಶಾಂತಿ ಪ್ರಸಾದ್ ಹೆಗ್ಡೆ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಹೈನುಗಾರಿಕೆ ಕಷ್ಟದ ವೃತ್ತಿಯಾಗಿದ್ದು ನಷ್ಟದ ಹಾದಿಯಾಗಿರುವುದರಿಂದ ರೈತರು ಹೈನುಗಾರಿಕೆಯಿಂದ ವಿಮುಕ್ತರಾಗುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಂತೆಯೇ ಗ್ರಾಮೀಣ ಪ್ರದೇಶದಲ್ಲಿ ಹಾಲು ಸೊಸೈಟಿಗಳು ಮುಚ್ಚುವ ಪರಿಸ್ಥಿತಿ ಬರಲಿದೆ. ಸರ್ಕಾರ ಹೈನುಗಾರಿಕೆಗೆ ನೀಡುವ ಫ್ರೋತ್ಸಾಹಧನವೂ ಹಲವು ತಿಂಗಳಿಂದ ಬಿಡುಗಡೆಯಾಗಿಲ್ಲ. ಬಾಕಿಯಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ೧೫ ರೂ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ವಲೇರಿಯನ್ ಕುಟಿನ್ಹೊ ಮಾತನಾಡಿ ಆರ್ಟಿಸಿಯಲ್ಲಿ ಬೆಳೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವುದರಿಂದ ರೈತರಿಗೆ ಸರ್ಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಜನಸಂಪರ್ಕ ಸಭೆಗಳೂ ರದ್ದುಗೊಂಡಿರುವುದರಿಂದ ರೈತರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದರು.
ಇದಕ್ಕೂ ಮೊದಲು ಶ್ಯಾಮಿಲಿ ಎನ್ಕ್ಲೇವ್ ಕಟ್ಟಡದ ಬಳಿಯಿಂದ ತಹಸೀಲ್ದಾರರ ಕಛೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಅಳಿಯೂರು ಕಿಸಾನ್ ಸಂಘದ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ ಮತ್ತು ಅಶ್ವಥ್ ಪಣಪಿಲ ಮನವಿ ಪತ್ರ ವಾಚಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ ತಾಲೂಕು ಕಾರ್ಯದರ್ಶಿ ವಸಂತ್ ಭಟ್ ಪಯ್ಯಾಡಿ, ಕಿಸಾನ್ ಪ್ರಮುಖರಾದ ಜಾಯ್ಲಸ್ ಡಿ ಸೋಜಾ, ಮಾರ್ಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಕಡಂದಲೆ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಟ್ಯಾನ್ ತೆಂಕ ಮಿಜಾರು ಸಂಘದ ಪ್ರಮುಖರಾದ ನೇಮಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
