ರಾ.ಹೆ. 169ರ ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಸಚಿವರಿಗೆ ಪತ್ರ ಬರೆದ ಸಂಸದ ಬ್ರಿಜೇಶ್ ಚೌಟ
ಬನ್ನಡ್ಕದಲ್ಲಿ ಸವೀ೯ಸ್ ರಸ್ತೆ ಇಲ್ಲದೆ ಆಗುತ್ತಿರುವ ಅಪಘಾತ, ಸಾವು, ತೊಂದರೆಗಳ ಬಗ್ಗೆ ಬನ್ನಡ್ಕ ಪರಿಸರದವರು ಇತ್ತೀಚೆಗೆ ಸಂಸದರ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಸಂಸದರು ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರೊಂದಿಗೆ ಸಭೆ ನಡೆಸಿದಾಗ, ಈ ಭಾಗದಲ್ಲಿ ಸುಮಾರು 650 ರಿಂದ 700 ಮೀಟರ್ವರೆಗೆ ಸರ್ವಿಸ್ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಅಂತರದ ಕಾರಣದಿಂದ ದಿನನಿತ್ಯ ಸಂಚಾರ ಮಾಡುವವರು ಮತ್ತು ಸ್ಥಳೀಯ ವಾಹನಗಳು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸಲು ಹಾಗೂ ವೇಗದ ಮುಖ್ಯ ಹೆದ್ದಾರಿಯನ್ನು ಅಪಾಯಕಾರಿಯಾಗಿ ದಾಟಲು ಅನಿವಾರ್ಯವಾಗುತ್ತಿದ್ದು, ಇದರಿಂದ ಅಪಘಾತಗಳು ಮರುಕಳಿಸುತ್ತಿವೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ, ಹೆದ್ದಾರಿಯ ಕೆಲವೆಡೆ ಸರ್ವಿಸ್ ರಸ್ತೆ ಕಾಮಗಾರಿ ಎರಡೂ ಬದಿಗಳಲ್ಲೂ ಪೂರ್ಣಗೊಂಡಿರುವುದು ತಿಳಿದುಬಂದಿದೆ. ಆದರೆ ಬನ್ನಡ್ಕದ ನಡುವಿನ ಮಧ್ಯದ ಭಾಗ ಮಾತ್ರ ಸಂಪರ್ಕವಿಲ್ಲದೆ ಉಳಿದಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಇನ್ನಷ್ಟು ಜೀವಹಾನಿಯನ್ನು ತಪ್ಪಿಸುವ ದೃಷ್ಟಿಯಿಂದ, ಈ ಅಪೂರ್ಣವಾಗಿರುವ 640 ಮೀಟರ್ ಸರ್ವಿಸ್ ರಸ್ತೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪತ್ರದ ಪ್ರತಿಯನ್ನು ಹೆದ್ದಾರಿ ಪ್ರಾಧಿಕಾರದ ಕರ್ನಾಟಕ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಾಂಕರ್ ಅವರಿಗೂ ಕಳುಹಿಸಿಕೊಡಲಾಗಿದೆ.