ಮೂಡುಬಿದಿರೆ ಬನ್ನಡ್ಕ ಅಪಘಾತ ವಲಯಕ್ಕೆ ಭೇಟಿ ನೀಡಿ ಪರಿಶೀಲನೆಗೈದ ಹೆದ್ದಾರಿ ಅಧಿಕಾರಿಗಳು, ಶಾಸಕ ಕೋಟ್ಯಾನ್: ಸರ್ವಿಸ್ ರಸ್ತೆ ನಿರ್ಮಿಸಲು ಖಡಕ್ ಸೂಚನೆ
ಎಸ್ಕೆಎಫ್ ಮತ್ತು ಬನ್ನಡ್ಕ ಗರಡಿ ಮುಂಭಾಗದಲ್ಲಿರುವ ಹೆದ್ದಾರಿ ಪ್ರವೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕು. ಕೂಡಲೇ 600 ಮೀಟರ್ ದೂರದವರೆಗೆ ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಮತ್ತು ಅಮನಬೆಟ್ಟು ಕ್ರಾಸ್ ರಸ್ತೆಯನ್ನು ಎತ್ತರಿಸಿ ವಾಹನ ಸವಾರರಿಗೆ ಹೆದ್ದಾರಿ ಸ್ಪಷ್ಟ ಗೊಚರತೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರ ಕಂಪನಿ ಡಿಬಿಎಲ್ನ ಅಧಿಕಾರಿಗಳಿಗೆ ಸೂಚಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಈ ಸಲಹೆಗಳನ್ನು ಕಾರ್ಯಗತಗೊಳಿಸುವುದಾಗಿ ಹೇಳಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಉಮಾನಾಥ ಕೋಟ್ಯಾನ್ ಅವರು ಸ್ಥಳೀಯರ ಸಲಹೆಯನ್ನು ಪರಿಗಣಿಸಲಾಗಿದೆ. ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸದಿರುವುದೂ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ವಾಹನ ಸವಾರರೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮಹಮ್ಮದ್ ನಾಝಿರ್, ಡಿಬಿಎಲ್ ಕಂಪನಿಯ ಮ್ಯಾನೇಜರ್ ಪ್ರಸಾದ್, ಸೈಟ್ ಇಂಜಿನಿಯರ್ ಬಾಲಾಜಿ, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಟಿ ರಾಘವ್ರಾವ್, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪಡುಮಾರ್ನಾಡು ಪಂಚಾಯತ್ ಪಿಡಿಒ ಸಾಯೀಶ್ ಚೌಟ, ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಮೂಡುಬಿದಿರೆ ಫಾಮ್೯ನ ಅಕ್ಷಯ್ ಜೈನ್, ಸ್ಥಳೀಯರಾದ ಸುಧಾಕರ ಆಚಾರ್ಯ, ಸಂತೋಷ್ ನಾಯ್ಕ್, ಮುಖಂಡರಾದ ರಂಜಿತ್ ಪೂಜಾರಿ, ಬೋಳ ವಿಶ್ವನಾಥ ಕಾಮತ್ ಮತ್ತಿತರರು ಈ ಸಂದಭ೯ದಲ್ಲಿದ್ದರು.
ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸುವೆ: ಸಂಸದ ಬ್ರಿಜೇಶ್ ಚೌಟ
ಬನ್ನಡ್ಕದಲ್ಲಿ ಅಪಘಾತಗಳಾಗುತ್ತಿದ್ದರೆ ಅದು ಕೇವಲ ಹೈವೇಯ ಸಮಸ್ಯೆಯಲ್ಲ. ಅಥವಾ ಸವೀ೯ಸ್ ರಸ್ತೆಯಿಲ್ಲವೆನ್ನುವುದು ಕಾರಣವಲ್ಲ. ರಾ. ಹೆದ್ದಾರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಸ್ಟಡಿ ಮಾಡಿ ತಿಳಿಸಲು ಅವರಲ್ಲಿ ಹೇಳಿದ್ದೇನೆ. ಪೊಲೀಸರಲ್ಲಿಯೂ ಸುರಕ್ಷತೆಯ ಬಗ್ಗೆ ಮಾತನಾಡಲಾಗುವುದು.
ಸವೀ೯ಸ್ ರಸ್ತೆಯ ಬಗ್ಗೆ ಪ್ಲ್ಯಾನ್ ನಲ್ಲಿದ್ದರೆ ನೋಡೋಣ ಇಲ್ಲದಿದ್ದರೆ ಪ್ರಪೋಸ್ ಮಾಡುವ ಒಟ್ಟಾರೆಯಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ಬ್ರಿಜೇಶ್ ಚೌಟ ಪತ್ರಿಕೆಗೆ ತಿಳಿಸಿದ್ದಾರೆ.

