ಹೋರಿಗಳನ್ನು ಮಾರಾಟದ ಶಂಕೆ: ಹಿ.ಜಾ.ವೇ.ಯಿಂದ ತನಿಖೆಗೆ ಡಿವೈಎಸ್ಪಿಗೆ ಮನವಿ
ಬಂಟ್ವಾಳ: ಸಾರ್ವಜನಿಕರಿಂದ ಚಿಕಿತ್ಸೆಗೆಂದು ಮತ್ತು ಸಂತಾನಾಭಿವೃದ್ಧಿಗೆ ತನ್ನಲ್ಲಿ ಗೋಶಾಲೆ ಇದೆ ಎಂದು ನಂಬಿಸಿ ಹಸುಗಳನ್ನು ಮತ್ತು ಹೋರಿಗಳನ್ನು ಪಡೆದುಕೊಂಡು ಮಾರಾಟಮಾಡಿರುವ ಕುರಿತಾಗಿ ಎರಡು ಮನೆಯ ಸಂತ್ರಸ್ತರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿ 6 ದಿನ ಕಳೆದರೂ ಪ್ರಕರಣ ದಾಖಲು ಮಾಡದ ಹಿನ್ನಲೆಯಲ್ಲಿ ಹಿಂದು ಜಾಗರಣಾ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಮುಖರು ಸೋಮವಾರ ಬಂಟ್ವಾಳ ಉಪವಿಭಾಗದ ಅಧೀಕ್ಷಕರನ್ನು ಭೇಟಿಯಾಗಿ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಕಾವಳಮುಡೂರು ಗ್ರಾಮದ ಕೆದ್ದಳಿಕೆ ನಿವಾಸಿ ಪ್ರಶಾಂತ ನಾಯ್ಕ ಎಂಬಾತ ಹಸುಗಳಿಗೆ ಮೇವು ಸಾಗಿಸುವ ಮತ್ತು ಪಶು ವೈದ್ಯಾಧಿಕಾರಿಗಳ ಜೊತೆ ನಿಕಟ ಸಂಪರ್ಕವನ್ನಿರಿಸಿಕೊಂಡು ಗ್ರಾಮೀಣ ಪ್ರದೇಶದ ರೈತರ ಸಂಪರ್ಕಿಸಿ ಅವರಲ್ಲಿ ಗರ್ಭದಾರಣೆಗೆ ಸಮಸ್ಯೆ ಇರುವ ಮತ್ತು ಗಂಡು ಕರುಗಳನ್ನು ಸಂತಾನ ಅಭಿವೃದ್ಧಿಗೆಂದು ತನ್ನಲ್ಲಿ ಗೋಶಾಲೆ ಇದ್ದು, ಅಲ್ಲಿ ಚಿಕಿತ್ಸೆ ಮತ್ತು ಹಾರೈಕೆ ಮಾಡುವುದಾಗಿ ನಂಬಿಸಿ, ಬಳಿಕ ರೈತರಿಗೆ ವಾಪಾಸು ಕೊಡದೆ ಮೋಸ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಿಂದ ಮನನೊಂದಿರುವ ಸ್ಥಳೀಯ ಎರಡು ಮನೆಯ ಸಂತ್ರಸ್ತರು ಈಗಾಗಲೇ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿ 6 ದಿನಗಳಾದರೂ ಪ್ರಕರಣ ದಾಖಲು ಮಾಡಲಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಪ್ರಶಾಂತ ನಾಯ್ಕ್ ಹಸುಗಳನ್ನು ಕಸಾಯಿಖಾನೆಗೆ ಮಾರಿದ ಸಂಶಯವಿದ್ದು, ಹಾಗೂ ಪಶು ವೈದ್ಯಾಧಿಕಾರಿಯ ಯಾವುದೇ ದಾಖಲೆ ಇಲ್ಲದೆ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿ.ಜಾ.ವೇ.ಯ ನಿಯೋಗ ಬಂಟ್ವಾಳ ಉಪವಿಭಾಗದ ಅಧೀಕ್ಷಕರನ್ನು ಆಗ್ರಹಿಸಿದೆ.
ಹಿಂದು ಜಾಗರಣ ವೇದಿಕೆಯ ನ್ಯಾಯ ಜಾಗರಣ ಪ್ರಮುಖ್ ವಕೀಲ ರಾಜೇಶ್ ಬೊಲ್ಲುಕಲ್ಲು, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪ್ರಮುಖರಾದ ಪುಷ್ಪರಾಜ್ ಕಮ್ಮಾಜೆ, ಅನೂಪ್ ಮಯ್ಯ ಉಪಸ್ಥಿತರಿದ್ದರು.