CPIM ಹಿರಿಯ ಸದಸ್ಯ, ಕಮ್ಯುನಿಸ್ಟ್ ಚಳುವಳಿಯ ಸಕ್ರಿಯ ಕಾರ್ಯಕರ್ತ ತಿಮ್ಮಯ್ಯ ಕೊಂಚಾಡಿ ನಿಧನ
80ರ ದಶಕದ ಮೊದಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ತಿಮ್ಮಯ್ಯ ಕೊಂಚಾಡಿಯವರು ಬಳಿಕ ಎಡಪಂಥೀಯ ಚಳುವಳಿಗೆ ಆಕರ್ಷಿತರಾಗಿ ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ತನ್ನ ಜೀವಿತದ ಕೊನೆಯ ಗಳಿಗೆಯವರೆಗೂ ದುಡಿಯುವ ವರ್ಗದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಬಸ್ ದರ ಏರಿಕೆ, ನೀರಿನ ದರಯೇರಿಕೆ, ಬಡ ನಿವೇಶನರಹಿತರಿಗಾಗಿ ನಡೆದ ಹೋರಾಟಗಳು ಸೇರಿದಂತೆ ಜಿಲ್ಲೆಯ ಅಸಂಖ್ಯಾತ ಹೋರಾಟಗಳಲ್ಲಿ ಭಾಗವಹಿಸಿ ಪೋಲಿಸ್ ಲಾಟಿಚಾರ್ಜ್ ಗೆ ಒಳಪಟ್ಟಿರುವುದು ಮಾತ್ರವಲ್ಲ ಜೈಲುವಾಸವನ್ನು ಕೂಡ ಅನುಭವಿಸಿದ್ದಾರೆ.ಅತ್ಯಂತ ಧೈರ್ಯಶಾಲಿಯಾಗಿದ್ದ ತಿಮ್ಮಯ್ಯರವರು ದಲಿತರ ಶೋಷಿತರ ಬಡವರಿಗೆ ಸಂಬಂಧಿಸಿದ ಯಾವುದೇ ವಿಚಾರಗಳು ಬಂದರೂ ನೇರವಾಗಿ ಅದಕ್ಕೆ ಸಂಬಂಧಿಸಿದ ಕಚೇರಿಗೆ ತೆರಳಿ ಕಾನೂನುಬದ್ಧ ವಿಚಾರಗಳನ್ನು ಚರ್ಚಿಸಿ ನ್ಯಾಯ ತೆಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ದಲಿತ ಸಮುದಾಯದ ಮಧ್ಯೆ ಕ್ರಿಯಾಶೀಲ ಪಾತ್ರ ವಹಿಸುವ ಮೂಲಕ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಅದಿವಾಸಿ ಸಮುದಾಯದ ಕುಟುಂಬಗಳಿಗೆ ಕೋಟಿಮುರದಲ್ಲಿ 8 ಮನೆಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಕಾಮಗಾರಿಯ ಉಸ್ತುವಾರಿಯನ್ನು ವಹಿಸಿ ಅತ್ಯಂತ ಪ್ರಾಮಾಣಿಕ ಸೇವೆಯನ್ನುಗೈದಿದ್ದಾರೆ.ಸ್ವತಃ ಕಟ್ಟಡ ಕಾರ್ಮಿಕರಾಗಿದ್ದ ತಿಮ್ಮಯ್ಯರವರು ಕಟ್ಟಡ ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದಾರೆ.ತಿಮ್ಮಯ್ಯ ಕೊಂಚಾಡಿಯವರ ಅಗಲುವಿಕೆಯು ಯೆಯ್ಯಾಡಿ ಕೊಂಚಾಡಿ ಪ್ರದೇಶ ಸೇರಿದಂತೆ ದ.ಕ.ಜಿಲ್ಲೆಯ ಎಡಪಂಥೀಯ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು CPIM ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ.
ತಿಮ್ಮಯ್ಯ ಕೊಂಚಾಡಿಯವರು 4 ಪುತ್ರರು ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.ಅವರ ನಿಧನಕ್ಕೆ CPIM,DYFI,SFI,JMS,CITU, ರೈತ ಸಂಘ,ಕಟ್ಟಡ ಕಾರ್ಮಿಕರ ಸಂಘಟನೆ, ಪ್ರಗತಿಪರ ಚಿಂತಕರ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿದೆ.