ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಪುನರಾಭಿವೃದ್ಧಿ
ಮಂಗಳೂರು: ಮಂಗಳೂರು ಸೆಂಟ್ರಲ್, ಬೊರಿವಲಿ ಮತ್ತು ಅಂಬಾಲ ಸಹಿತ ಜನನಿಬಿಡ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಪುನರಭಿವೃದ್ಧಿ ಯೋಜನೆಯು ಹೆಚ್ಚು ಜನದಟ್ಟಣೆ ಇರುವ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 2 ಹೊಸ ಪ್ಲಾಟ್ಫಾರ್ಮ್ಗಳ ನಿರ್ಮಾಣವನ್ನು ಪ್ರಸ್ತಾವಿಸಿದೆ. ಜತೆಗೆ ಪ್ಲಾಟ್ಫಾರ್ಮ್ ಮೇಲ್ದರ್ಜೆಗೇರಿಸುವುದು, ಹೊಸ 6 ಮೀಟರ್ ಅಗಲದ ಪಾದಚಾರಿ ಸೇತುವೆಯ ನಿರ್ಮಾಣ, ಸುಧಾರಿತ ಪ್ಲಾಟ್ಫಾರ್ಮ್ ಶೆಲ್ಟರ್ಗಳು ಮತ್ತು ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ ಎಸ್ಕಲೇಟರ್ಗಳು ಮತ್ತು ಲಿಫ್ಟ್ಗಳ ಸ್ಥಾಪನೆಯೂ ಒಳಗೊಂಡಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಪುನರ್ಭಿವೃದ್ಧಿ ಕಾರ್ಯ ನಡೆಸುವಂತೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳೂರು ಸೆಂಟ್ರಲ್ ನಿಲ್ದಾಣವು ಪ್ರಸ್ತುತ ಪ್ರತಿದಿನ 28 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಮತ್ತು ಸುಮಾರು 50 ರೈಲುಗಳನ್ನು ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ನಿಲ್ದಾಣದ ಸಾಮರ್ಥ್ಯ ವೃದ್ಧಿ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದು ಅತ್ಯಗತ್ಯವಾಗಿದೆ.