ಯುವಕನ ಶವ ಪತ್ತೆ
ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ದುಷ್ಕರ್ಮಿಗಳ ದುಷ್ಕೃತ್ಯ ಎಂದು ಶಂಕೆ ವ್ಯಕ್ತವಾಗಿದೆ.
ಮೃತಪಟ್ಟ ಯುವಕ ಉತ್ತರ ಭಾರತದ ಮೂಲದವನೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಎಂಆರ್ಪಿಎಲ್-ಸುರತ್ಕಲ್ ರಸ್ತೆಯ ಜೋಕಟ್ಟೆಗೆ ಸಂಪರ್ಕ ಕಲ್ಪಿಸುವ ಸಣ್ಣ ಫ್ಲೈಓವರ್ ಬಳಿಯ ರಸ್ತೆಬದಿಯ ಚರಂಡಿಯಲ್ಲಿ ಶವ ಪತ್ತೆಯಾಗಿದೆ.
ಘಟನಾ ಸ್ಥಳದ ಸಮೀಪವಿರುವ ಮನೆಯೊಂದರ ಗೇಟ್ ಬಳಿ ರಕ್ತದ ಕಲೆಗಳು ಕಂಡುಬಂದಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಶವ ಪತ್ತೆಯಾದ ಸ್ಥಳದಿಂದ ಸುಮಾರು ಒಂದೂವರೆ ಮೀಟರ್ ದೂರದಲ್ಲಿರುವ ಈ ಮನೆಯ ಗೇಟ್ ಬಳಿ ರಕ್ತದ ಕಲೆಗಳಿರುವುದರಿಂದ, ಯುವಕನನ್ನು ಕೊಲೆ ಮಾಡಿ ನಂತರ ಇಲ್ಲಿಗೆ ತಂದು ಎಸೆದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಣಂಬೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.