ಅಭಿಮಾನಿಗಳತ್ತ ನಗುಮುಖದೊಂದಿಗೆ ಕೈ ಬೀಸಿದ ಸಿಎಂ ವಿಜಯ್
Friday, June 12, 2026
ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಇಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು.
ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ವಿಮಾನಿಲ್ದಾಣದ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಅವರು ವಿಜಯ್ ಅವರನ್ನು ಬರ ಮಾಡಿಕೊಂಡರು.
ಈ ವೇಳೆ ಆಭಿಮಾನಿಗಳು ವಿಜಯ್ ಅವರಿದ್ದ ಕಾರಿನತ್ತ ಮುಗಿಬಿದ್ದರು. ಕೆಲವರು ಟಿವಿಕೆ ಪಕ್ಷದ ಧ್ವಜವನ್ನೂ ಬೀಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಅಭಿಮಾನಿಗಳ ಪ್ರೀತಿಗೆ ಪ್ರತಿಕ್ರಿಯಿಸಿದ ವಿಜಯ್, ನಗುಮುಖದೊಂದಿಗೆ ಕೈಬೀಸಿ ಶುಭಾಶಯ ಕೋರಿದರು. ಬಳಿಕ ಅವರು ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದತ್ತ ಬಿಗು ಭದ್ರತೆಯೊಂದಿಗೆ ಕಾರಿನಲ್ಲಿ ತೆರಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ವಿಜಯ್ ಆಗಮಿಸಿದ್ದಾರೆ.